ರಾಂಪುರ: ಕಳೆದೊಂದು ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ ಬಾಗಲಕೋಟೆ ತಾಲ್ಲೂಕಿನ ಶಿರೂರ ಪಟ್ಟಣದ ಬೆಟ್ಟದ ತಪ್ಪಲಿನಲ್ಲಿ ಚಿಕ್ಕ ಚಿಕ್ಕ ಜಲಪಾತಗಳು ಧುಮ್ಮುಕ್ಕಿ ನೋಡುಗರ ಕಣ್ಮನ ಸೆಳೆಯುತ್ತಿವೆ.
ಮೂರ್ನಾಲ್ಕು ದಿನ ಮಳೆ ಸುರಿದರೆ ಈ ಬೆಟ್ಟದಲ್ಲಿರುವ ವಿವಿಧ ಹೆಸರಿನ ದಿಡುಗುಗಳು ಜಲಪಾತದಂತೆ ಹರಿದು ಸೊಬಗನ್ನು ಸೃಷ್ಟಿಸಿ ಜನರನ್ನು ಆಕರ್ಷಿಸುತ್ತವೆ. ಮೂರು ದಿನಗಳಿಂದ ಜಲಧಾರೆಯ ವೈಭವ ವೀಕ್ಷಿಸಿಲು ಶಿರೂರಿನ ಸ್ಥಳಿಯರಲ್ಲದೇ ಸುತ್ತಲಿನ ಗ್ರಾಮಗಳ ಜನ ತಂಡೋಪ ತಂಡವಾಗಿ ಬರುತ್ತಿದ್ದಾರೆ.
ಮೈದುಂಬಿ ಹರಿಯುತ್ತಿರುವ ಬೈರಪ್ಪನಪಡಿ, ಜೋಕುಮಾರಸ್ವಾಮಿ ಪಡಿ, ಬೆಣ್ಣೆ ದಿಡುಗುಗಳು ಆಕರ್ಷಣೀಯ ಕಿರು ಜಲಪಾತಗಳಾಗಿದ್ದು, ಮಕ್ಕಳು ನೀರಿನ ಝರಿಯಲ್ಲಿ ಮಿಂದು ಆನಂದಪಡುತ್ತಿದ್ದಾರೆ. ಭಾನುವಾರ ಈ ಕಿರು ಜಲಪಾತಗಳ ವೈಭವವನ್ನು ಹೆಚ್ಚಿನ ಸಂಖ್ಯೆಯ ಜನ ಕಣ್ತುಂಬಿಕೊಂಡರು. ಈ ಝರಿಗಳಲ್ಲಿ ಹರಿದು ಬರುವ ನೀರು ಬೆಟ್ಟದ ಕೆಳಗಿರುವ ಸಣ್ಣ ಕೆರೆ ಸೇರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.