ಕೆರೂರ: ಮಸಾರಿ ಜಮೀನುಗಳ ಕೃಷಿಕರು ತಮ್ಮ ಮಿತ್ರರು ಹಾಗೂ ಪರಿವಾರದೊಂದಿಗೆ ಹೊಲಗಳಿಗೆ ತೆರಳಿ ಭೂಮಾತೆಗೆ ನಮಿಸಿ, ನೈವೇದ್ಯ ಅರ್ಪಿಸುವ ಮೂಲಕಸೀಗಿ ಹುಣ್ಣಿಮೆ ಆಚರಿಸಿದರು.
ಈ ಹಬ್ಬಕ್ಕೆಂದೇ ರೈತಾಪಿ ಕುಟುಂಬಗಳ ಮಹಿಳೆಯರು ಹಿಂದಿನ ರಾತ್ರಿಯೆಲ್ಲಾ ಎದ್ದು ಚರಗಕ್ಕೆ ಬೇಕಾದ ಭಕ್ಷ್ಯ-ಭೋಜನ ತಯಾರಿಸಿದರು.
ಸಜ್ಜಿ, ಜೋಳದ ರೊಟ್ಟಿ, ಎಣ್ಣೆಗಾಯಿ ಬದನೆಕಾಯಿ, ಚಪಾತಿ, ಕೆನೆ ಮೊಸರು, ವಿವಿಧ ಬಗೆಯ ಚಟ್ನಿಗಳು ಹಾಗೂ ಕಡಬು, ಕರ್ಚಿಕಾಯಿ, ಸಜ್ಜೆಗಡಬು, ಚೌಳಿಕಾಯಿ ಪಲ್ಯ ಮತ್ತು ಮೆಣಸಿನಕಾಯಿ ಪಲ್ಯ ಮುಂತಾದ ಬಗೆ ಬಗೆಯ ಭಕ್ಷ್ಯ, ಭೋಜನವನ್ನು ಭೂತಾಯಿಗೆ ನೈವೇದ್ಯ ತೋರಿಸಿದರು. ಚರಗವನ್ನು ಜಮೀನಿನ ತುಂಬೆಲ್ಲಾ ಬೆಳೆಗಳಿಗೆ ಅರ್ಪಿಸಿ, ಮುತ್ತೈದೆಯರಿಗೆ ಉಡಿ ತುಂಬಿ ಸಂತಸಪಟ್ಟರು.
ರೈತರು ತಮ್ಮ ಬಂಧು, ಮಿತ್ರರೊಂದಿಗೆ ಭೂತಾಯಿಯ ಒಡಲಲ್ಲಿ ಕುಳಿತು ಹಬ್ಬದ ವಿಶಿಷ್ಟ ಬಗೆಯ ಭಕ್ಷ್ಯ, ಭೋಜನಗಳನ್ನು ಸವಿದರು. ‘ಬೆಳೆಯ ಸಮೃದ್ಧಿ ತುಂಬಿದ ಹೊಲದಲ್ಲಿ ಭೂತಾಯಿಗೆ ನಮಿಸಿ, ಬಂಧು ಪರಿವಾರಕ್ಕೆ ಜವಾರಿ ಭೋಜನ ಉಣಿಸುವುದು ನಿಜಕ್ಕೂ ಕೃಷಿಕರಿಗೆ ಸಾರ್ಥಕ ಭಾವ’ ಎನ್ನುತ್ತಾರೆ ಶಿವಪುತ್ರಪ್ಪ ಹುಂಡೇಕಾರ.
ಈ ಬಾರಿ ಅಧಿಕ ಮಳೆಯ ಆರ್ಭಟದಿಂದ ಎರೆ ಹಾಗೂ ಮಸಾರಿ ಜಮೀನುಗಳಲ್ಲಿ ಕಾಲಿಡಲು ಸಹ ಸಾಧ್ಯವಾಗುತ್ತಿಲ್ಲ. ಬಹುತೇಕ ಕಡೆಗೆ ಇನ್ನೂ ಹಿಂಗಾರು ಬಿತ್ತನೆ ಸಾಧ್ಯವಾಗಿಲ್ಲ. ಈರುಳ್ಳಿ, ಮೆಣಸಿನಕಾಯಿ ಬೆಳೆಗಳಂತೂ ಮಳೆಯಲ್ಲಿ ಕೊಳೆತು ಹೋಗಿವೆ. ಚರಗದ ಹಬ್ಬದ ಸಡಗರದಲ್ಲಿ ಇದ್ದ ರೈತಾಪಿ ಬಂಧು ಮಿತ್ರರು ಅಧಿಕ ಮಳೆಯಿಂದ ಎಲ್ಲೆಡೆ ಭೂತಾಯಿ ಹಸಿರುಟ್ಟ ಸಿಂಗಾರವನ್ನು ಕಣ್ತುಂಬ ಅನುಭವಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.