ಬಾಗಲಕೋಟೆ: ಮುಂಬೈನಿಂದ ಕಾರ್ಮಿಕರನ್ನುಹೊತ್ತು ತಂದ ಶ್ರಮಿಕ ರೈಲು ಮಂಗಳವಾರ ಬಾಗಲಕೋಟೆ ರೈಲು ನಿಲ್ದಾಣ ತಲುಪಿತು. ಬಾಗಲಕೋಟೆ ಜಿಲ್ಲೆಯ 31, ಬೆಳಗಾವಿಯ 11 ಹಾಗೂ ರಾಯಚೂರು ಜಿಲ್ಲೆಯ ಒಬ್ಬರು ಸೇರಿ ಒಟ್ಟು 43 ಮಂದಿ ಬಂದಿಳಿದರು.
ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿಯೇ ಹೆಚ್ಚಾಗಿರುವ ಹಿನ್ನಲೆಯಲ್ಲಿ ಅಲ್ಲಿಂದ ಬಂದವರ ಮೇಲೆ ಸರ್ಕಾರ ತೀವ್ರ ನಿಗಾವಹಿಸುತ್ತಿದೆ. ರೈಲು ಬಾಗಲಕೋಟೆಗೆ ಬಂದ ವೇಳೆ ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ ನೇತೃತ್ವದ ತಂಡ ಹಾಜರಿದ್ದು, ಎಲ್ಲ ಮುಂಜಾಗ್ರತಾ ಕ್ರಮ ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಂಡಿತು.
ಮುಂಬೈನಿಂದ ಬಂದ ಕಾರ್ಮಿಕರಿಗೆ ಆರೋಗ್ಯ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ಮೂಲಕ ಪ್ರಾಥಮಿಕ ತಪಾಸಣೆ ನಡೆಸಿ ಕೈಗಳಿಗೆ ಸೀಲ್ ಹಾಕಿದರು. ಪ್ರತ್ಯೇಕ ವಾಹನಗಳ ಮೂಲಕ ಬಂದ ಜಿಲ್ಲೆಯ 31 ಕಾರ್ಮಿಕರನ್ನು ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲಾಯಿತು. ಅಲ್ಲಿಯೇ ತಪಾಸಣೆಗೆ ವ್ಯವಸ್ಥೆ ಮಾಡಲಾಯಿತು.
ಬೆಳಗಾವಿ ಜಿಲ್ಲೆಯ 11 ಮತ್ತು ರಾಯಚೂರು ಜಿಲ್ಲೆಯ ಒಬ್ಬ ವ್ಯಕ್ತಿಯನ್ನು ಅವರ ಜಿಲ್ಲೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು. ಮುಂಬೈನಿಂದ ಬಂದವರಲ್ಲಿ ಬಾಗಲಕೋಟೆಯ 17, ಇಳಕಲ್ನ 11, ಬಾದಾಮಿ, ಹುನಗುಂದ, ಬೀಳಗಿಯ ತಲಾ ಒಬ್ಬರು ಸೇರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.