ಬಾಗಲಕೋಟೆ: ‘ಸರ್ಕಾರದಲ್ಲಿ ದುಡ್ಡಿಲ್ಲದ ಕಾರಣ ಕೆರೂರು ಏತ ನೀರಾವರಿ ಯೋಜನೆಗೆ ಚಾಲನೆ ವಿಳಂಬವಾಗಿದೆ. ಮುಂದಿನ ವರ್ಷ ಅದನ್ನು ಆರಂಭಿಸಲಾಗುವುದು’ಎಂದು ಬಾದಾಮಿ ಶಾಸಕರೂ ಆದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಬಾದಾಮಿಯಲ್ಲಿ ಸೋಮವಾರ ಬಾದಾಮಿ– ಕೆರೂರು ಪಟ್ಟಣಗಳು ಹಾಗೂ ಮಾರ್ಗಮಧ್ಯದ 18 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು ಕಲ್ಪಿಸುವ ಯೋಜನೆಗೆ ಶಂಕುಸ್ಥಾಪನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆರೂರು ಏತ ನೀರಾವರಿಗೆ ಯೋಜನೆ ಅನುಷ್ಠಾನಕ್ಕೆ ₹550 ಕೋಟಿಯ ಅಂದಾಜು ವೆಚ್ಚ ರೂಪಿಸಲಾಗಿದೆ. ಅನುಮೋದನೆಗೆ ಸಂಬಂಧಿಸಿದ ಕಡತ ಹಣಕಾಸು ಇಲಾಖೆಗೆ ಹೋಗಿದೆ. ಆದರೆ ದುಡ್ಡಿಲ್ಲದೇ ಅಲ್ಲಿಯೇ ನಿಂತಿದೆ ಎಂದರು.
ಕಾನೂನು ರೂಪಿಸಲಿ
ಎಸ್ಇಪಿ–ಟಿಎಸ್ಪಿ ಯೋಜನೆಗಳಡಿ ಮೀಸಲಿಟ್ಟ ಹಣವನ್ನು ಕಡ್ಡಾಯವಾಗಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಕಲ್ಯಾಣಕ್ಕೆ ಬಳಸಬೇಕು ಎಂಬ ಕಾನೂನನ್ನು ರಾಜ್ಯದಲ್ಲಿ ನನ್ನ ಅವಧಿಯಲ್ಲಿ ರೂಪಿಸಿದ್ದೇನೆ. ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ–ಪಂಗಡದವರಿಗೆ ಮೀಸಲಾತಿ ಕಲ್ಪಿಸಿದ್ದೇನೆ. ದಲಿತರೆಂದರೆ ಬರೀ ಮತ ಹಾಕಿಸಿಕೊಳ್ಳುವುದಲ್ಲ. ಅವರಲ್ಲೂ ಆರ್ಥಿಕ ಸಬಲತೆ ತರಬೇಕಿದೆ. ಆ ನಿಟ್ಟಿನಲ್ಲಿ ಕೇಂದ್ರದಲ್ಲೂ ಪ್ರಧಾನಿಮಂತ್ರಿ ನರೇಂದ್ರ ಮೋದಿ ಈ ಕೆಲಸ ಮಾಡಲಿ ಎಂದು ಸವಾಲು ಹಾಕಿದರು.
ಕೇಂದ್ರದ ಬಜೆಟ್ನಲ್ಲಿ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ₹10 ಸಾವಿರ ಕೋಟಿ ಅನುದಾನ ಕಡಿತಗೊಳಿಸಲಾಗಿದೆ. ಇದು ಸರ್ಕಾರಿ ಕಾರ್ಯಕ್ರಮದ ವೇದಿಕೆ. ಆ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ವಿಸ್ತೃತವಾಗಿ ಮಾತನಾಡುವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.