ADVERTISEMENT

ನಿಷೇಧಾಜ್ಞೆ ನಡುವೆ ಏಕವ್ಯಕ್ತಿ ಪ್ರತಿಭಟನೆ!

ಗುಂ‍ಪಾಗಿ ಬರುವವರ ವಶಕ್ಕೆ ಪಡೆಯಲು ಸಜ್ಜಾಗಿದ್ದ ಪೊಲೀಸರೇ ತಬ್ಬಿಬ್ಬು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 13:24 IST
Last Updated 20 ಡಿಸೆಂಬರ್ 2019, 13:24 IST
ಕೇಂದ್ರ ಸರ್ಕಾರದ ಪೌರತ್ವ ವಿರೋಧಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಬದನೂರ ಬಾಗಲಕೋಟೆಯಲ್ಲಿ ಶುಕ್ರವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು
ಕೇಂದ್ರ ಸರ್ಕಾರದ ಪೌರತ್ವ ವಿರೋಧಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಬದನೂರ ಬಾಗಲಕೋಟೆಯಲ್ಲಿ ಶುಕ್ರವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು   

ಬಾಗಲಕೋಟೆ: ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದ ಕಾರಣ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಬದನೂರ ಶುಕ್ರವಾರ ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಒಬ್ಬರೇ ಪ್ರತಿಭಟನೆಗೆ ಕುಳಿತು ಗಮನ ಸೆಳೆದರು.

ನಿಷೇಧಾಜ್ಞೆ ನಡುವೆಯೂ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸುವುದಾಗಿ ಘೋಷಿಸಿತ್ತು. ಹೀಗಾಗಿ ಜಿಲ್ಲಾಡಳಿತ ಭವನದ ಎದುರು ಡಿವೈಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಗುಂಪಾಗಿ ಬಂದು ಪ್ರತಿಭಟನೆಗೆ ಮುಂದಾದಲ್ಲಿ ಹೋರಾಟಗಾರರನ್ನು ವಶಕ್ಕೆ ಪಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ರಮೇಶ ಬದನೂರ ಒಬ್ಬರೇ ಬಂದು ಬಂಧಿಸಲು ಸಜ್ಜಾದವರನ್ನು ತಬ್ಬಿಬ್ಬುಗೊಳಿಸಿದರು.

ಕಾಯ್ದೆ ರದ್ಧತಿಗೆ ಆಗ್ರಹ:

ADVERTISEMENT

ಈ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಗಳ ಜಾರಿಯನ್ನು ಬದನೂರ ವಿರೋಧಿಸಿದರು. ಕೂಡಲೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

‘ವಲಸಿಗರಿಗೆ ಪೌರತ್ವ ನೀಡಲು ಹೊರಟಿರುವ ಕೇಂದ್ರ ಸರ್ಕಾರ, ದೇಶದೊಳಗೆ ಈಗ ಇರುವವರಿಗೆ ಅಗತ್ಯ ಸೌಕರ್ಯಗಳ ನೀಡಿಲ್ಲ. ಇಂತಹ ಅಸಂವಿಧಾನಿಕ ನಿಲುವಿನಿಂದ ಭಾರತದ ಜಾತ್ಯಾತೀತ ಪರಂಪರೆಗೆ ಪೆಟ್ಟುಕೊಟ್ಟಿದೆ. ಕೇಂದ್ರ ಸರ್ಕಾರ ಅಕ್ರಮ ವಲಸಿಗರಿಗೆ ಮತ್ತಷ್ಟು ಸೌಲಭ್ಯ ನೀಡಿ ದೇಶವನ್ನು ಇನ್ನಷ್ಟು ಆರ್ಥಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಕಷ್ಟಗಳಿಗೆ ದೂಡುತ್ತಿರುವುದು ಮೂರ್ಖತನದ ಪರಮಾವಧಿ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.