
ಬೀಳಗಿ: ಜನಸಾಮಾನ್ಯರು ಆರೋಗ್ಯವಾಗಿ ಇರಬೇಕು. ಅವರಿಗೆ ಕೈಗೆಟಕುವ ರೀತಿಯಲ್ಲಿ ಆರೋಗ್ಯ ಸೇವೆ ಸಿಗಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಗುಣಮಟ್ಟದ ಎಂಡೋಸ್ಕೋಪಿ ಸೌಲಭ್ಯ ಒದಗಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಎಸ್.ಆರ್. ಪಾಟೀಲ ವೈದ್ಯಕೀಯ ಮಹಾದ್ಯಾಲಯದ ಸಂಸ್ಥಾಪಕ ಅಧ್ಯಕ್ಷ, ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.
ಬಾಡಗಂಡಿಯ ಎಸ್. ಆರ್.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಎಂಡೋಸ್ಕೋಪಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡುತ್ತಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಹಿರಿಯ ಅಧಿಕಾರಿಗಳು ಮತ್ತು ವೈದ್ಯರು ರೋಗಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂದರು.
ವೈದ್ಯಕೀಯ ಅಧೀಕ್ಷಕ ವಿಜಯಾನಂದ ಹಳ್ಳಿ ಮಾತನಾಡಿ, ಹೊಸ ಎಂಡೋಸ್ಕೋಪಿ ಘಟಕವು ಅತ್ಯಾಧುನಿಕ ಹೈ-ಡೆಫಿನಿಷನ್ ಇಮೇಜಿಂಗ್ ವ್ಯವಸ್ಥೆ ಮತ್ತು ಪ್ರಸ್ತುತ ವೈದ್ಯಕೀಯ ಮಾನದಂಡಗಳಿಗೆ ಅನುಗುಣವಾದ ಸಾಧನಗಳಿಂದ ಸಜ್ಜುಗೊಂಡಿದೆ ಎಂದರು.
ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲ ಮಾತನಾಡಿ, ಸಮಗ್ರ ಹಾಗೂ ಕೈಗೆಟುಕುವ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಆಸ್ಪತ್ರೆ ನಿರಂತರವಾಗಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ತಿಳಿಸಿದರು.
ಎಂಡೋಸ್ಕೋಪಿ ವೈದ್ಯ ಈ.ಬಿ. ಕಲಬುರ್ಗಿ ಮಾತನಾಡಿ, ಬಾಡಗಂಡಿಯ ಗ್ರಾಮೀಣ ಪ್ರದೇಶದಲ್ಲಿ ಎಲ್ಲ ಸೌಲಭ್ಯವುಳ್ಳ ಹೈಟಕ್ ಆಸ್ಪತ್ರೆ ತರೆದು ಈ ಭಾಗದ ಬಡಜನರಿಗೆ ಹೆಚ್ಚಿನ ಅನುಕೂಲ ಮಾಡಿದ್ದಾರೆ. ಎಂಡೋಸ್ಕೋಪಿಯಿಂದ ಜೀರ್ಣಾಂಗ ವ್ಯವಸ್ಥೆ (ಅನ್ನನಾಳ, ಹೊಟ್ಟೆ, ಕರುಳುಗಳು) ಉಸಿರಾಟದ ವ್ಯವಸ್ಥೆ (ಶ್ವಾಸನಾಳ ಮತ್ತು ಶ್ವಾಸಕೋಶಗಳು) ಮೂತ್ರನಾಳ, ಹೆಣ್ಣು ಸಂತಾನೋತ್ಪತ್ತಿ ಅಂಗಾಂಗಳು, ಕೀಲುಗಳು ಮತ್ತು ಕಿಬ್ಬೊಟ್ಟೆಯ ಕುಹರ ರೋಗನಿರ್ಣಯ ಮತ್ತು ಚಿಕಿತ್ಸೆ ಎರಡಕ್ಕೂ ಇದು ಸುರಕ್ಷಿತ, ತ್ವರಿತ ಮತ್ತು ಪರಿಣಾಮಕಾರಿ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು, ದೇಹದ ಆಂತರಿಕ ಅಂಗಗಳು, ಅಂಗಾಂಶಗಳು ಅಥವಾ ನಾಳಗಳನ್ನು ವಿಕ್ಷೀಸಲು ಅಥವಾ ಕಾರ್ಯನಿರ್ವಹಿಸಲು ಇದನ್ನು ಬಳಸಲಾಗುತ್ತದೆ. ಇದರಿಂದ ರೋಗಿಗಳ ಆರೋಗ್ಯ ತಪಾಸಣೆಗೆ ಹೆಚ್ಚು ಅನುಕೂಲವಾಗಿದೆ ಎಂದರು.
ಕಾರ್ಯದರ್ಶಿ ಎಮ್.ಎನ್.ಪಾಟೀಲ, ಉಪಾಧ್ಯಕ್ಷೆ ಅನುಷಾ ಆರ್.ನಾಡಗೌಡ, ರಾಹುಲ ನಾಡಗೌಡ, ಕಿರಣ ಜಮಖಂಡಿ, ಎಂ.ಐ.ವಾಲಿಕರ, ಶಬರೀಶ ಜಿ.ಎಂ ಸೇರಿದಂತೆ ಹಿರಿಯ ವೈದ್ಯರು, ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.