
ಕುಳಗೇರಿ ಕ್ರಾಸ್: ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ–218 ರಲ್ಲಿ ವಾಹನ ಸಂಚಾರ ಬಂದ್ ಮಾಡಿ ಬಾದಾಮಿ ತಾಲ್ಲೂಕಿನ ವಿವಿಧ ಗ್ರಾಮಗಳ ಕಬ್ಬು ಬೆಳೆಗಾರರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಸಮಯದಲ್ಲಿ ರೈತರು ಟಾಯರ್ಗೆ ಬೆಂಕಿ ಹಚ್ಚಲು ಯತ್ನಿಸಿದಾಗ ಪೊಲೀಸರು ರೈತರನ್ನು ತಡೆದರು. ಇದರಿಂದ ಪೊಲೀಸರೊಂದಿಗೆ ರೈತರು ಕೆಲಕಾಲ ವಾಗ್ವಾದ ನಡೆಸಿದರು. ಕಬ್ಬು ಬೆಳೆಗಾರರ ಹೋರಾಟದಿಂದಾಗಿ ಸುಮಾರು ನಾಲ್ಕು ತಾಸು ಪ್ರಯಾಣಿಕರು ಪರದಾಡಿದರು. ರೈತರ ಮೇಲೆ ಪೊಲೀಸ್ ದೌರ್ಜನ್ಯಕ್ಕೆ ದಿಕ್ಕಾರ ಹಾಗೂ ರಾಜ್ಯ-ಕೇಂದ್ರ ಸರ್ಕಾರಗಳ ವಿರುದ್ದ ರೈತರು ಬೊಬ್ಬೆ ಹೊಡೆದು ಆಕ್ರೋಶ ಹೊರ ಹಾಕಿದರು.
ರೈತ ಸಂಘದ ಹೋರಾಟಗಾರ ಪ್ರಕಾಶ ನಾಯ್ಕರ ಮಾತನಾಡಿ, ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ಇರುವುದು ರಾಜಕಾರಣಿಗಳ ಬಿಟ್ಟರೆ ಬೇರೆ ಯಾರದ್ದು ಸಕ್ಕರೆ ಕಾರ್ಖಾನೆಗಳು ಇಲ್ಲ. ಇದರಿಂದ ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ಪ್ರಮಾಣದಲ್ಲಿ ರಾಜ್ಯದಲ್ಲಿ ಆಡಳಿತವಿರುವ ಸರ್ಕಾರಕ್ಕೆ ಕಬ್ಬು ಬೆಲೆ ನಿಗದಿಗೆ ಅಡ್ಡಿಯಾಗಿವೆ ಎಂದು ತಿಳಿದಿದೆ. ₹3,500 ಕಬ್ಬು ಬೆಲೆ ನಿಗದಿ ಮಾಡದೆ ಇರುವ ಕಾರ್ಖಾನೆ ಮಾಲೀಕರ ಹಾಗೂ ರಾಜ್ಯ–ಕೇಂದ್ರ ಸರ್ಕಾರಗಳ ವಿರುದ್ದ ಹರಿಹಾಯ್ದರು.
ಎಸ್.ಡಿ.ಜೋಗಿನ ಮಾತನಾಡಿ, ಕಾರ್ಖಾನೆ ಮಾಲೀಕರ ಹಾಗೂ ರಾಜ್ಯ –ಕೇಂದ್ರ ಸರ್ಕಾರಗಳ ವಿರುದ್ದ ಹರಿಹಾಯ್ದರು. ಒಂದು ಟನ್ ಕಬ್ಬು ಬೆಳೆಗೆ ₹3,500 ಬೆಲೆ ನಿಗದಿ ಮಾಡಬೇಕು. ಕಬ್ಬು ಪಡೆಯುವ ಸಕ್ಕರೆ ಕಾರ್ಖಾನೆ ಮಾಲೀಕರು ಉತ್ತಮ ತೂಕವನ್ನು ಮಾಡಿ ರೈತರು ಕಬ್ಬು ಬೆಳೆಯನ್ನು ಕೊಂಡುಕೊಳ್ಳುವಂತೆ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸಿಎಂ ಸಿದ್ದರಾಮಯ್ಯ ಅವರು ಸಭೆಯಲ್ಲಿ ತಾಕೀತು ಮಾಡುವಂತೆ ರೈತರು ಮನವಿ ಮಾಡಿದರು.
ಪರಸಪ್ಪ ಕಲಾದಗಿ, ರಮೇಶಗೌಡ ಪಾಟೀಲ, ಮುತ್ತ ದೇಸಾಯಿ, ಶರಣಪ್ಪ ಲಿಂಗರಡ್ಡಿ, ಶಂಕ್ರಪ್ಪ ಅಬ್ಬಿಗೇರಿ, ಶಿವಮೂರ್ತಯ್ಯ ಹಿರೇಮಠ, ವಾಸುರಾಜ ಭಾವಿ, ದ್ಯಾಮಣ್ಣ ಸೋಮನಕಟ್ಟಿ, ಮಲ್ಲಯ್ಯ ಮುಪ್ಪಿನವರ, ರುದ್ರೇಶ ಹುಣಸಿಗಿಡದ, ಶಹಾಸಜಿ ಪವಾರ, ಈರಣ್ಣ ಉಳ್ಳಾಗಡ್ಡಿ, ಶಿವಪ್ಪ ಬನಪ್ಪನವರ, ಮಹಾಂತೇಶ ಅಂಗಡಿ ಕುಳಗೇರಿ ಹೋಬಲಿಯ ಸುತ್ತಮುತ್ತಲಿನ ಗ್ರಾಮಗಳ ಕಬ್ಬು ಬೆಳೆಗಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.