
ಲೋಕಾಪುರ: ಕಬ್ಬು ಬೆಳೆ ದರ ನಿಗದಿ ಮಾಡಲು ಒತ್ತಾಯಿಸಿ ರೈತರು ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿರುವುದು ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿತು.
ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬಸವೇಶ್ವರ ವರ್ತಕ ಸಂಘದಿಂದ ಬೆಂಬಲ ನೀಡಿ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಬಸವೃಶ್ವರ ವೃತ್ತದಲ್ಲಿ ನಡೆದ ರೈತರ ಸಭೆ ನಡೆಯಿತು. ರೈತರನ್ನು ಕಡೆಗಣಿಸಿದರೆ ನೀವು ಉದ್ದಾರವಾಗುವುದಿಲ್ಲ, ರೈತರ ನ್ಯಾಯಯುತ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು. ಹಿಂದಿನ ವರ್ಷದ ಬಾಕಿ ಹಣವನ್ನು ಪಾವತಿಸಬೇಕು ಎಂದು ಭೀಮನ್ನ ಮೇಳ್ಳಿಗೇರಿ ತಿಳಿಸಿದರು.
ರೈತರ ಬೇಡಿಕೆ ನ್ಯಾಯಸಮ್ಮತವಾಗಿದೆ. ರೈತರ ಹೋರಾಟ ರಾಜ್ಯವ್ಯಾಪ್ತಿ ವ್ಯಾಪಿಸಿದ್ದು, ಚಳವಳಿಯನ್ನು ಹತ್ತಿಕ್ಕುವ ಬದಲು ಸರ್ಕಾರ ಇಚ್ಚಾಶಕ್ತಿ ಪ್ರದರ್ಶನಮಾಡಲಿ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ವಿ.ಹಲಕಿ ಹೇಳಿದರು.
ರಾಯಚೂರು, ವಿಜಯಪೂರ ಮತ್ತು ಬೆಳಗಾವಿ ರಸ್ತೆಗಳನ್ನು ಬೆಳಿಗ್ಗೆಯಿಂದ ಬಂದ್ ಮಾಡಿದ್ದರಿಂದ ಬಸ್ ಸಂಚಾರವೂ ಸ್ಥಗಿತವಾಗಿತ್ತು. ಕೆಲವು ದೂರದ ಪ್ರಯಾಣಿಕರು ಪರದಾಡುವಂತಾಗಿ ರಸ್ತೆ ಪಕ್ಕದಲ್ಲಿ ಮಲಗಿ ವಿಶ್ರಾಂತಿ ಪಡೆದರು. ಕಿಲ್ಲಾಹೋಸಕೋಟೆ ಮತ್ತು ದಾದನಟ್ಟಿ ಗ್ರಾಮದ ರೈತರು ಟ್ಯಾಕ್ಟರ್ಗಳನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ಮುದ್ದಾಪೂರ, ಹೆಬ್ಬಾಳ, ಗ್ರಾಮಗಳ ರೈತರು ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದರು. ಲೋಕಣ್ಣ ಕೊಪ್ಪದ,ಮಲ್ಲಪ್ಪ ಅಂಗಡಿ,ಉಲ್ಲಾಸ ಮುದ್ದಾಪೂರ,ಲೋಕಣ್ಣ ಗದ್ಯಾಳ, ಗೋಪಾಲಗೌಡ ಪಾಟೀಲ, ಶೆಟ್ಯೆಪ್ಪ ಮಾಳಿ, ಶಿವಲಿಂಗಪ್ಪ ಜಂಬಗಿ, ಚನ್ನಪ್ಪ ಮುದ್ದಾಪೂರ, ರೈತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.