ಬಾಗಲಕೋಟೆ: ’ರಾಜ್ಯದಲ್ಲಿ ಪಕ್ಷ ಸಂಘಟನೆಯ ಭಾಗವಾಗಿ ಕಳೆದ ಚುನಾವಣೆಯಲ್ಲಿ ಸೋತಿರುವ ಅಭ್ಯರ್ಥಿಗಳು ಹಾಗೂ ಪದಾಧಿಕಾರಿಗಳನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಶೀಘ್ರ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ‘ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಬನಹಟ್ಟಿ ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿಭಾಗವಾರು ಸುರ್ಜೆವಾಲಾ ಅವರ ಭೇಟಿ ಕಾರ್ಯಕ್ರಮ ನಿಗದಿಯಾಗಿದೆ. ಮಂಗಳೂರು, ತುಮಕೂರು, ಹುಬ್ಬಳ್ಳಿ–ಧಾರವಾಡಕ್ಕೂ ಭೇಟಿ ಕೊಡಲಿದ್ದಾರೆ. ಅಭ್ಯರ್ಥಿಗಳೊಂದಿಗೆ ಮಾತುಕತೆ ಜೊತೆಗೆ ಸಮಾವೇಶ ಕೂಡ ನಡೆಸಲಿದ್ದಾರೆ ಎಂದರು.
’ಸಿಎಂ ಕುರ್ಚಿ ಅಲುಗಾಡುತ್ತಿದೆಯಲ್ಲ?‘ ಎಂಬ ಪ್ರಶ್ನೆಗೆ, ಒಂದು ವಾರ ಕಾಯಿರಿ ಎಂದು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು. ’ನನ್ ಚೇರ್ ಏನೋ ಬಿಗಿಯಾಗಿ ಇದೆಯಪ್ಪಾ.. ಎಂದು ಕೆಳಗೆ ಕೂತ ಬೆಂಚ್ ತಟ್ಟಿ ತೋರಿಸಿದರು. ಯಡಿಯೂರಪ್ಪ ಕುರ್ಚಿ ಬಗ್ಗೆ ನನಗೆ ಗೊತ್ತಿಲ್ಲ. ಅವರನ್ನು ಇಳಿಸೋದು, ಏಳಿಸೋದು, ಕೂರಿಸೋದು ಅವರ ಪಕ್ಷಕ್ಕೆ ಬಿಟ್ಟದ್ದು‘ ಎಂದರು.
ಸಿಎಂ ವಿರುದ್ಧ ಅವರ ಪಕ್ಷದ ಶಾಸಕರೇ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಹಾಗಿದ್ದರೂ ಶಾಸಕರು ಹೇಳುತ್ತಿರುವುದು ಸರಿಯಲ್ಲ ಎಂದು ಹೈಕಮಾಂಡ್ ಹೇಳುತ್ತಿಲ್ಲ. ಹಾಗಿದ್ದರೆ ಅದು ನಿಜ ಇರಬೇಕಲ್ಲವೇ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.