
ಹುನಗುಂದ: ನಿವೃತ್ತ ನೌಕರರ ಉತ್ಸಾಹ ನಮ್ಮೆಲ್ಲರಿಗೂ ಸ್ಫೂರ್ತಿ ಎಂದು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹೇಳಿದರು.
ಬುಧವಾರ ನಗರದ ಗುರುಭವನದಲ್ಲಿ ನಡೆದ ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರ ಹಿತವರ್ಧಕ ಸಂಘದ 27ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ 70 ವರ್ಷ ಪೂರೈಸಿದ ಹಿರಿಯ ಚೇತನರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯರು ಕ್ರಿಯಾಶೀಲರಾಗಿ ಮತ್ತು ಚಟುವಟಿಕೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ತುಂಬಾ ಖುಷಿ ನೀಡಿದೆ. ನಿಮ್ಮ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಯಾವುದೇ ಇಲಾಖೆಯಲ್ಲಿ ತೊಂದರೆಯಾದರೆ ನನ್ನ ಗಮನಕ್ಕೆ ತನ್ನಿ. ಸರ್ಕಾರದ ಸೌಲಭ್ಯಗಳನ್ನು ನೌಕರರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಗಮೇಶ ಪಾಟೀಲ ಮಾತನಾಡಿ, ಹಿರಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ನಿಮ್ಮ ವೃತ್ತಿಯಲ್ಲಿನ ಅನುಭವಗಳನ್ನು ಸ್ಮರಿಸುತ್ತಾ ನಿವೃತ್ತಿ ಜೀವನವನ್ನು ಆನಂದಿಸಿ. ಮಕ್ಕಳಿಗೆ, ಮೊಮ್ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಎಂದರು.
ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರ ಹಿತವರ್ಧಕ ಸಂಘದ ಅಧ್ಯಕ್ಷ ಎ.ಕೆ.ಉಪನಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದಲ್ಲಿ 70 ವರ್ಷ ಪೂರೈಸಿದ ಹಿರಿಯ ಚೇತನರನ್ನು ಸನ್ಮಾನಿಸಲಾಯಿತು. ಎನ್.ಬಿ.ನಾಗನಗೌಡರ ಪ್ರಸ್ತಾವಿಕ ನುಡಿಗಳನ್ನಾಡಿದರು. ಸಿ.ಎಸ್.ಅಂಗಡಿ ಸಂಘದ ವಾರ್ಷಿಕ ವರದಿ ವಾಚಿಸಿದರು. ಬಿ.ವೈ.ಕೊಡಗಾನೂರ, ಎಸ್.ಕೆ.ಕೊನೆಸಗಾರ, ವೈ.ವಿ. ಹೊಸಗೌಡರ, ಎನ್.ಎಂ.ನಾಡಗೌಡರ, ಎ.ಎಸ್. ಮಠ, ಎನ್.ಬಿ.ಕರಂಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.