ರಬಕವಿ ಬನಹಟ್ಟಿ: ಇತ್ತೀಚಿನ ದಿನಗಳಲ್ಲಿ ಜವಳಿ ಉದ್ದಿಮೆ ಸಂಕಷ್ಟದಲ್ಲಿದೆ. ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಹೆಚ್ಚು ನೂಲಿನ ಪೂರೈಕೆ ಇರುವುದರಿಂದ ನಮ್ಮ ಗಿರಣಿಯ ನೂಲಿಗೆ ಹೆಚ್ಚಿನ ದರ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹಲವು ವರ್ಷಗಳಿಂದ ನೂಲಿನ ಗಿರಣಿಗಳು ಹಾನಿಯಲ್ಲಿ ನಡೆಯುತ್ತಿದೆ. ಪ್ರಸ್ತುತ ಸಾಲಿನಲ್ಲಿ ನೂಲಿನ ಗಿರಣಿ ₹3.40 ಕೋಟಿ ಹಾನಿಯಲ್ಲಿದೆ ಎಂದು ಸ್ಥಳೀಯ ಸಹಕಾರಿ ನೂಲಿನ ಗಿರಣಿಯ ಅಧ್ಯಕ್ಷ ವಿಜಯಕುಮಾರ ಜುಂಜಪ್ಪನವರ ತಿಳಿಸಿದರು.
ಶುಕ್ರವಾರ ನಡೆದ ನೂಲಿನ ಗಿರಣಿಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನೂಲಿನ ಗಿರಣಿಯ ನಿರ್ದೇಶಕ ರಾಜಶೇಖರ ಸೋರಗಾವಿ ಮಾತನಾಡಿ, ನೂಲಿನ ಗಿರಣಿಯ ಅಭಿವೃದ್ಧಿಗೆ ಸರ್ಕಾರದ ಸಹಾಯ ಹಸ್ತ ಅನಿವಾರ್ಯವಾಗಿದೆ. ಸರ್ಕಾರ ನೂಲಿನ ಗಿರಣಿಗೆ ₹ 30 ಕೋಟಿ ಸಹಾಯ ಧನ ನೀಡಿದರೆ, ಮುಂದಿನ ದಿನಗಳಲ್ಲಿ ನೂಲಿನ ಗಿರಣಿ ಇನ್ನಷ್ಟು ಉತ್ತಮವಾದ ನೂಲನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ ಎಂದರು.
ದುಂಡಪ್ಪ ಮಾಚಕನೂರ ಮಾತನಾಡಿ, ರಾಜ್ಯದಲ್ಲಿ ನೇಕಾರರ ಬಂಡವಾಳದಿಂದ ಸ್ಥಾಪಿತಗೊಂಡ ಏಕೈಕ ನೂಲಿನ ಗಿರಣಿ ಇದಾಗಿದ್ದು, ಗಿರಣಿಯ ಪುನಶ್ಚೇತನಕ್ಕೆ ಸರ್ಕಾರದ ಸಹಾಯ ಅಗತ್ಯವಾಗಿದೆ ಎಂದರು.
ಸಭೆಯ ವೇದಿಕೆಯ ಮೇಲೆ ಉಪಾಧ್ಯಕ್ಷ ಬಸವರಾಜ ತೆಗ್ಗಿ, ಶಂಕರ ಜಾಲಿಗಿಡದ, ಶಂಕರ ಜುಂಜಪ್ಪನವರ, ಬ್ರಿಜ್ಮೋಹನ ಡಾಗಾ, ಶ್ರೀಶೈಲ ಆಸಂಗಿ, ದೇವೇಂದ್ರ ಬಸಪ್ಪಗೋಳ, ಸುಭಾಸ ಮಲ್ಲನ್ನವರ, ರಾಜೇಂದ್ರ ಭದ್ರನವರ, ಜಿ.ಎಸ್.ಗೊಂಬಿ, ಪ್ರಭು ಉಮದಿ, ಶಾಂತಾ ಗಸ್ತಿ, ನೀಲವ್ವ ಬಾಣಕಾರ, ವಿರೂಪಾಕ್ಷಪ್ಪ ಕೊಕಟನೂರ ಸೇರಿದಂತೆ ಅನೇಕರು ಇದ್ದರು.
ಮಹಾದೇವ ಹುಲಜತ್ತಿ ಸ್ವಾಗತಿಸಿದರು. ಮಲ್ಲಪ್ಪ ಹನಗಂಡಿ ನಿರೂಪಿಸಿದರು. ಬಸವರಾಜ ತೆಗ್ಗಿ ವಂದಿಸಿದರು. ಸಭೆಯಲ್ಲಿ ಸುರೇಶ ಚಿಂಡಕ, ಮಹಾದೇವ ಚರ್ಕಿ, ಮಲ್ಲಿನಾಥ ಕಕಮರಿ, ಸಿದ್ರಾಮ ಸವದತ್ತಿ, ದಾನಪ್ಪ ಹುಲಜತ್ತಿ, ಪ್ರಭಾಕರ ಮುಳದೆ, ಶ್ರೀಶೈಲ ಬಾಗಲಕೋಟ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.