ADVERTISEMENT

ಬಾದಾಮಿ ತಹಶೀಲ್ದಾರ್ ಮೇಲೆ ಹಲ್ಲೆ: ಲಾರಿ ಚಾಲಕ ಸೇರಿ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 14:35 IST
Last Updated 9 ಸೆಪ್ಟೆಂಬರ್ 2020, 14:35 IST
ಬಾದಾಮಿ ತಾಲ್ಲೂಕಿನ ನೀರಬೂದಿಹಾಳದಲ್ಲಿ ಹಲ್ಲೆಗೊಳಗಾದ ತಹಶೀಲ್ದಾರ್ ಸುಹಾಸ್ ಇಂಗಳೆ ಅವರ ಕಣ್ಣಿನ ಕೆಳಗೆ ಗಾಯ ಆಗಿರುವುದು
ಬಾದಾಮಿ ತಾಲ್ಲೂಕಿನ ನೀರಬೂದಿಹಾಳದಲ್ಲಿ ಹಲ್ಲೆಗೊಳಗಾದ ತಹಶೀಲ್ದಾರ್ ಸುಹಾಸ್ ಇಂಗಳೆ ಅವರ ಕಣ್ಣಿನ ಕೆಳಗೆ ಗಾಯ ಆಗಿರುವುದು   

ಬಾಗಲಕೋಟೆ: ರಸ್ತೆಯಲ್ಲಿ ಅಡ್ಡಲಾಗಿ ನಿಲ್ಲಿಸಿದ್ದ ಲಾರಿ ತೆರವುಗೊಳಿಸುವಂತೆ ಹೇಳಿದ ತಹಶೀಲ್ದಾರ್ ಮೇಲೆ ಚಾಲಕ ಹಾಗೂ ಆತನ ಸಹೋದರ ಸೇರಿ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಾದಾಮಿ ತಹಶೀಲ್ದಾರ್ ಸುಹಾಸ ಇಂಗಳೆ ಹಲ್ಲೆಗೊಳಗಾದವರು. ಹಲ್ಲೆಯಿಂದ ಅವರ ಕಣ್ಣಿನ ಕೆಳಗೆ ಗಾಯವಾಗಿದ್ದು, ಊದಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ನಾಗಪ್ಪ ಜಾನಮಟ್ಟಿ ಹಾಗೂ ಸಹೋದರ ಶಿವಾನಂದ ಜಾನಮಟ್ಟಿ ಎಂಬುವವರನ್ನು ಕೆರೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಾದಾಮಿ ತಾಲ್ಲೂಕಿನ ವಿವಿಧೆಡೆ ಭೇಟಿ ನೀಡಿದ್ದ ಕೇಂದ್ರ ಪ್ರವಾಹ ಅಧ್ಯಯನ ತಂಡವನ್ನು ಮುಧೋಳ ತಾಲ್ಲೂಕಿನ ಲೋಕಾಪುರಕ್ಕೆ ಬಿಟ್ಟು ವಾಪಸ್ ಕೇಂದ್ರ ಸ್ಥಾನಕ್ಕೆ ಬರುವಾಗ ಘಟನೆ ನಡೆದಿದೆ.

ADVERTISEMENT

’ಪಾನಮತ್ತರಾಗಿದ್ದ ಚಾಲಕ ನಾಗಪ್ಪ ಹಾಗೂ ಆತನ ಸಹೋದರನೀರಬೂದಿಹಾಳ ಗ್ರಾಮದಲ್ಲಿ ರಸ್ತೆ ಮೇಲೆ ಲಾರಿ ನಿಲ್ಲಿಸಿ ಬೇರೆಯವರೊಂದಿಗೆ ಜಗಳ ಕಾಯುತ್ತಿದ್ದರು. ಈ ವೇಳೆ ನನ್ನೊಂದಿಗೆ ಇದ್ದ ಗ್ರಾಮ ಲೆಕ್ಕಾಧಿಕಾರಿ ಮಧ್ಯಪ್ರವೇಶಿಸಿ, ವಾಹನ ಹೋಗಲು ದಾರಿ ಬಿಟ್ಟು ಲಾರಿ ನಿಲ್ಲಿಸುವಂತೆ ಹೇಳಿದರು. ಇದರಿಂದ ಕುಪಿತಗೊಂಡ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಶರ್ಟ್ ಹಿಡಿದು ಎಳೆದಾಡಿದರು. ಬಿಡಿಸಲು ಹೋದ ನನ್ನ ಮೇಲೆ ಕೈ ಮಾಡಿದರು. ಅವರು ಹಲ್ಲೆ ಮಾಡುತ್ತಾರೆ ಎಂಬ ಸುಳಿವು ಇರಲಿಲ್ಲ. ಅದೊಂದು ದಿಢೀರನೆ ನಡೆದ ಘಟನೆ‘ ಎಂದು ತಹಶೀಲ್ದಾರ್ ಸುಹಾಸ ಇಂಗಳೆ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಬಾದಾಮಿ ಠಾಣೆ ವೃತ್ತ ನಿರೀಕ್ಷಕ, ತಹಶೀಲ್ದಾರ್ ಅವರಿಗೆ ವೈದ್ಯಕೀಯ ನೆರವು ಕೊಡಿಸಿದರು. ನಂತರ ಸುಹಾಸ ಇಂಗಳೆ ಕೆರೂರು ಠಾಣೆಯಲ್ಲಿ ದೂರು ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.