ರಾಂಪುರ: ಈ ವರ್ಷದ ಫಲಾಫಲ ಕುರಿತು ಸಮೀಪದ ಶಿರೂರ ಪಟ್ಟಣದಲ್ಲಿ ವಸಂತರಾವ್ ಕಡಿವಾಲ ಆಚಾರ್ಯರು ಭವಿಷ್ಯ ನುಡಿದಿದ್ದು, ಈ ಬಾರಿ ಉತ್ತಮ ಮಳೆ ಹಾಗೂ ಬೆಳೆ ಬರಲಿದ್ದು, ಎಲ್ಲವೂ ಸಮೃದ್ಧವಾಗಿದೆ ಎಂದಿದ್ದಾರೆ.
ಯುಗಾದಿ ಮರಿಪಾಡ್ಯೆ ದಿನವಾದ ಸೋಮವಾರ ಪಟ್ಟಣದ ಕಮ್ಮಾರ ಓಣಿಯ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಹಿರಿಯರ ಸಮ್ಮುಖದಲ್ಲಿ ಪಂಚಾಂಗ ಓದುವ ಮೂಲಕ ವರ್ಷದ ರಾಶಿಫಲ ಹೇಳಿದರು.
‘ರೈತರಿಗೆ ಸಕಾಲಕ್ಕೆ ಅನುಕೂಲವಾಗುವ ಮಳೆಗಳು ಉತ್ತಮವಾಗಿ ಆಗಲಿವೆ. ರೈತರು ಕೃಷಿಗೆ ಒತ್ತು ನೀಡಬೇಕು, ಒಳ್ಳೆಯ ಭವಿಷ್ಯವಿದೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ಜನರಲ್ಲಿ ಭಕ್ತಿ, ಭಾವ, ಧಾರ್ಮಿಕತೆ ಹೆಚ್ಚಾಗಲಿದೆ. ಸುಃಖ, ಶಾಂತಿ, ನೆಮ್ಮದಿಯ ಕಾಲ ಇದಾಗಲಿದೆ’ ಎಂದು ನುಡಿದರು.
ಯುಗಾದಿಯ ಈ ಭವಿಷ್ಯಕ್ಕೆ ಬಾಬುದಾರ ಕುಟುಂಬದವರು ಹಾಗೂ ಪಟ್ಟಣದ ಹಿರಿಯರನ್ನು ಬಾಜಾ, ಭಜಂತ್ರಿಯೊಂದಿಗೆ ಚಾವಡಿಗೆ ಕರೆತರಲಾಯಿತು. ಅಲ್ಲಿ ನೂತನ ವರ್ಷದ ಪಂಚಾಂಗಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಫಲಾಫಲ ತಿಳಿಸಲಾಯಿತು.
ಸುರೇಶ ದೇಸಾಯಿ, ಶ್ರೀನಿವಾಸ ಇನಾಂದಾರ, ತಿಪ್ಪಣ್ಣ ಪಟ್ಟಣಶೆಟ್ಟಿ, ಪ್ರಭಾಕರ ಕುಲಕರ್ಣಿ, ಯಂಕಪ್ಪ ಶಿಂಪಿ, ವೆಂಕಟರಾವ್ ಕುಲಕರ್ಣಿ, ಸಿದ್ದಯ್ಯ ಎಮ್ಮಿಮಠ, ಯರಗುರದಪ್ಪ ಹೊಸಮನಿ, ಶಿವಪ್ಪ ಅಚನೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.