ADVERTISEMENT

9 ತಿಂಗಳಿಂದ ಕೈಸೇರದ ಸಂಬಳ:ಗುತ್ತಿಗೆ ಪೌರಕಾರ್ಮಿಕರಿಂದ ಧರಣಿ

ಗುಳೇದಗುಡ್ಡ ಪುರಸಭೆ ಎದುರು ಗುತ್ತಿಗೆ ಪೌರಕಾರ್ಮಿಕರಿಂದ ಧರಣಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 3:13 IST
Last Updated 8 ಸೆಪ್ಟೆಂಬರ್ 2020, 3:13 IST
ಗುಳೇದಗುಡ್ಡ ಪುರಸಭೆಯ ಗುತ್ತಿಗೆ ಪೌರಕಾರ್ಮಿಕರು ವೇತನ ಪಾವತಿಗೆ ಆಗ್ರಹಿಸಿ ಸೋಮವಾರ ಧರಣಿ ನಡೆಸಿದರು
ಗುಳೇದಗುಡ್ಡ ಪುರಸಭೆಯ ಗುತ್ತಿಗೆ ಪೌರಕಾರ್ಮಿಕರು ವೇತನ ಪಾವತಿಗೆ ಆಗ್ರಹಿಸಿ ಸೋಮವಾರ ಧರಣಿ ನಡೆಸಿದರು   

ಗುಳೇದಗುಡ್ಡ: ಇಲ್ಲಿನ ಪುರಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರು 9 ತಿಂಗಳಿಂದ ಬಾಕಿ ಉಳಿಸಿ ಕೊಂಡಿರುವ ವೇತನವನ್ನು ಪಾವತಿ ಮಾಡಬೇಕು ಎಂದು ಆಗ್ರಹಿಸಿ ಇಲ್ಲಿನ ಪುರಸಭೆ ಎದುರು ಸೋಮವಾರ ಧರಣಿ ನಡೆಸಿದರು.

ಕಾರ್ಮಿಕರ ಮುಖಂಡ ಭೀಮಸಿ ನಡುವಿನಮನಿ ಮಾತನಾಡಿ, ಪಟ್ಟಣದ ಸ್ವಚ್ಛತಾ ಕಾರ್ಯನಿರ್ವಹಿಸುವ ಗುತ್ತಿಗೆ ಪೌರಕಾರ್ಮಿಕರಿಗೆ 9 ತಿಂಗಳಿಂದ ವೇತನ ನೀಡಿಲ್ಲ. ಇದರಿಂದ ಕಾರ್ಮಿಕರ ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ವೇತನ ನೀಡುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಮನವಿ ಮಾಡಿಕೊಂಡು ಸಾಕಾಗಿ ಹೋಗಿದೆ. ಹೀಗಾಗಿ ಗುತ್ತಿಗೆ ಪೌರ ಕಾರ್ಮಿಕರೆಲ್ಲ ಧರಣಿ ಸತ್ಯಾಗ್ರಹ ಕೈಗೊಂಡಿದ್ದೇವೆ. ಇನ್ನಾದರೂ ಬೇಡಿಕೆ ಈಡೇರಿಸಬೇಕು ಎಂದು ಹೇಳಿದರು.

ADVERTISEMENT

ಅಗತ್ಯ ವಸ್ತುಗಳ ಬೆಲೆ ದಿನವೂ ಏರಿಕೆಯಾಗುತ್ತಿದೆ. ವೇತನ ಇಲ್ಲದ ಜೀವನ ಸಾಗಿಸುವುದು ಕಷ್ಟವಾಗಿದೆ. ಸಾಲ ಮಾಡಿ ಜೀವನ ನಡೆಸುವ ದಯನೀಯ ಸ್ಥಿತಿ ಒದಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಪುರಸಭೆ ಕಚೇರಿಯ ವ್ಯವಸ್ಥಾಪಕ ರಮೇಶ ಪದಕಿ, ಗುತ್ತಿಗೆ ಪೌರಕಾರ್ಮಿಕರ ಬೇಡಿಕೆಗಳ ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾ ಗುವುದು. ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಧರಣಿ ಹಿಂಪಡೆಲಾಯಿತು.

ಗುತ್ತಿಗೆ ಪೌರಕಾರ್ಮಿಕರಾದ ಮುತ್ತು ಹ.ಹೆಬ್ಬಳ್ಳಿ, ಉಮೇಶ ದು.ಮಾದರ, ಹನಮಂತ ದು, ಮಾದರ, ಪ್ರದೀಪ ಕೊತಂಬರಿ ಸೇರಿದಂತೆ 20ಕ್ಕೂ ಹೆಚ್ಚು ಪೌರ ಕಾರ್ಮಿಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.