ಬಾಗಲಕೋಟೆ: ಅಂಗವಿಕಲರ ಚಟುವಟಿಕೆಗಳಿಗಾಗಿ ₹58 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸಮುದಾಯ ಭವನ ಉದ್ಘಾಟನೆಗೊಂಡು ಎರಡು ವರ್ಷಗಳಾದರೂ ಬಳಕೆಯಾಗುತ್ತಿಲ್ಲ. ಭವನದ ಸುತ್ತ–ಮುತ್ತ ಜಾಲಿ ಗಿಡಗಳು ಬೆಳೆದಿವೆ. ಕೆಲವು ಬಳ್ಳಿಗಳು ಕಿಟಕಿಯವರೆಗೂ ಬೆಳೆದಿವೆ.
ಸೆಕ್ಟರ್ ನಂಬರ್ 25ರಲ್ಲಿ ಸ್ಟೇಟ್ ಬ್ಯಾಂಕ್ ಇಂಡಿಯಾ ಹಿಂದುಗಡೆ ಎರಡು ವರ್ಷಗಳ ಹಿಂದೆ ವಿಶ್ವ ಅಂಗವಿಕಲರ ದಿನಾಚರಣೆ ದಿನದಂದೇ ಸಮುದಾಯ ಭವನ ನಿರ್ಮಾಣಕ್ಕೆ ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಸಿ. ಪಾಟೀಲ ಉದ್ಘಾಟನೆ ಮಾಡಿದ್ದರು. ವಿಧಾನಸಭೆ ಚುನಾವಣೆಗೆ ಮುನ್ನ ಅವಸರದಲ್ಲಿ ಉದ್ಘಾಟನೆಯನ್ನೂ ಮಾಡಲಾಗಿತ್ತು.
ಉದ್ಘಾಟನೆ ಕಾರ್ಯಕ್ರಮ ನಡೆದಿದ್ದು, ಬಿಟ್ಟರೆ ಅಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಸದಾಕಾಲ ಬಾಗಿಲು ಹಾಕಿಯೇ ಇರುತ್ತದೆ. ಲಕ್ಷಾಂತರ ವೆಚ್ಚ ಮಾಡಿದ್ದರೂ, ಪ್ರಯೋಜನಕ್ಕೆ ಬಂದಿಲ್ಲ. ಅಂಗವಿಕಲರ ಬಗ್ಗೆ ವೇದಿಕೆಗಳ ಮೇಲೆ ಮಾತನಾಡಲಾಗುತ್ತದೆ. ಆದರೆ, ಅವರಿಗಾಗಿ ನಿರ್ಮಿಸಿರುವ ಸೌಲಭ್ಯಗಳು ಮಾತ್ರ ಅವರಿಗೆ ತಲುಪಿಸುತ್ತಿಲ್ಲ.
ರಾಜ್ಯ ಹಣಕಾಸು ಆಯೋಗ, ಜಿಲ್ಲಾ ಪಂಚಾಯಿತಿ 15ನೇ ಹಣಕಾಸು ಯೋಜನೆಗಳಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ₹58 ಲಕ್ಷ ವೆಚ್ಚದಲ್ಲಿ ನೆಲ ಮಹಡಿ ನಿರ್ಮಾಣ ಮಾಡಲು ಆರಂಭಿಸಿ, ನಿರ್ಮಾಣವನ್ನೂ ಮಾಡಲಾಗಿದೆ. ಕೆಲಸಕ್ಕಾಗಿ ಜಿಲ್ಲಾ ಕೇಂದ್ರಕ್ಕೆ ಬರುವ ಅಂಗವಿಕಲರ ಅನುಕೂಲಕ್ಕಾಗಿ ಮೊದಲ ಮಹಡಿಯಲ್ಲಿ ಅಂಗವಿಕಲರ ಡಾರ್ಮಟರಿ, ಐದು ಕೊಠಡಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆ ಕಾರ್ಯ ಏನಾಗಿದೆ ಎಂಬ ಬಗ್ಗೆ ಅಧಿಕಾರಿಗಳಿಗೇ ಮಾಹಿತಿ ಇಲ್ಲ.
‘ಜಿಲ್ಲೆಗೆ ಹೊಸದಾಗಿ ಬಂದಿದ್ದೇನೆ. ಅಂಗವಿಕಲರಿಗಾಗಿ ಸಮುದಾಯ ಭವನ ನಿರ್ಮಾಣ ಮಾಡಿರುವ ಬಗ್ಗೆ ಮಾಹಿತಿ ಇಲ್ಲ. ಮಾಹಿತಿ ಪಡೆದುಕೊಂಡು ಪರಿಶೀಲನೆ ನಡೆಸಲಿದ್ದೇನೆ’ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಗಿರಿಜಾ ಪಾಟೀಲ ತಿಳಿಸಿದರು.
ಈ ಹಿಂದೆಯೇ ಅಂಗವಿಕಲರ ಭವನ ಬಳಕೆಗೆ ನೀಡುವುದಾಗಿ ಹೇಳಿದ್ದರು. ಆದರೆ ಇಲ್ಲಿಯವರೆಗೆ ಬಳಕೆಗೆ ಅನುಕೂಲ ಮಾಡಿಕೊಟ್ಟಿಲ್ಲ. ಸಾರ್ವಜನಿಕರ ಹಣ ಪೋಲಾಗುತ್ತಿದೆಘನಶ್ಯಾಂ ಭಾಂಡಗೆ ಅಂಗವಿಕಲ ಹೋರಾಟಗಾರ
ಕಚೇರಿಗಳಿಗೆ ಹೋಗಲು ಪರದಾಟ:
ಬಾಗಲಕೋಟೆ ಜಿಲ್ಲಾಧಿಕಾರಿ ಹಾಗೂ ಇತರೆ ಕಚೇರಿಗಳನ್ನು ಒಳಗೊಂಡಿರುವ ಜಿಲ್ಲಾಡಳಿತ ಭವನ ಬಹು ಅಂತಸ್ತಿನ ಕಟ್ಟಡವಾಗಿದೆ. ಅಂಗವಿಕಲರು ಮೇಲಂತಸ್ತಿನ ಕಚೇರಿಗಳಿಗೆ ಹೋಗಲು ಪರದಾಡಬೇಕಿದೆ. ಮೊದಲ ಭಾಗದಲ್ಲಿ ಬರುವ ಮೇಲಂತಸ್ತಿನ ಕಚೇರಿಗಳಿಗೆ ಹೋಗಲು ಲಿಫ್ಟ್ ಇದೆ. ಎರಡನೇ ಭಾಗದಲ್ಲಿ ಬರುವ ಕಚೇರಿಗಳಿಗೆ ನಿರ್ಮಿಸಿದ್ದ ಲಿಫ್ಟ್ ಹಲವು ತಿಂಗಳುಗಳಿಂದ ಹಾಳಾಗಿದೆ. ದುರಸ್ತಿ ಮಾಡದ್ದರಿಂದ ಪಾವಟಿಗಳನ್ನು ಏರಿಕೊಂಡು ತೆವಳುತ್ತಾ ಸಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.