
ಬಾಗಲಕೋಟೆ: ಜೂ.21ರಂದು ಅಂತರರಾಷ್ಟ್ರೀಯ ಯೋಗ ದಿನ ಆಚರಿಸುವಂತೆ, ಡಿ.21 ಅನ್ನು ವಿಶ್ವ ಧ್ಯಾನ ದಿನವನ್ನಾಗಿ ಪ್ರತಿ ವರ್ಷ ಆಚರಿಸೋಣ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ಪಿರಮಿಡ್ ಸ್ಪಿರಿಚುವಲ್ ಸೊಸೈಟಿ ಮೂವ್ಮೆಂಟ್ಸ್, ಹೋಪ್ ಫೌಂಡೇಷನ್, ಮಹಾವತಾರ ಫೌಂಡೇಷನ್ ಹಾಗೂ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಸಹಯೋಗದಲ್ಲಿ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ವಿಶ್ವ ಧ್ಯಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಳಕಲ್ ವಿಜಯಮಹಾಂತೇಶ ಸಂಸ್ಥಾನದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಅಂತರಂಗದ ಅರಿವಿಗೆ ಧ್ಯಾನವೇ ದಾರಿ. ಧ್ಯಾನದಿಂದ ಏಕಾಗ್ರತೆ ಮತ್ತು ಮನೋವಿಕಾಸ ಸಾಧ್ಯ. ಧ್ಯಾನದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮನಃಶಾಂತಿ ಕಂಡುಕೊಳ್ಳಬೇಕು ಎಂದರು.
ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿ, 21ನೇ ಶತಮಾನದಲ್ಲಿ ಮಾನವೀಯ ಮೌಲ್ಯ ಕ್ಷೀಣಿಸುತ್ತಿವೆ. ಯಾಂತ್ರಿಕತೆಯ ಸಂಬಂಧ, ನೈತಿಕ ಮೌಲ್ಯಗಳ ಅಧಃಪತನವಾಗುತ್ತಿದೆ. ಮೌಲ್ಯಗಳ ಪುನರುಜ್ಜೀವನಗೊಳಿಸಲು ಧ್ಯಾನ ಅಗತ್ಯ ಎಂದು ಅಭಿಪ್ರಾಯಪಟ್ಟರು.
ತುಮಕೂರು ಶ್ರೀಕ್ಷೇತ್ರ ಹಿರೇಮಠದ ಶಿವಾನಂದ ಶಿವಾಚಾರ್ಯರು ಮಾತನಾಡಿ, ಧ್ಯಾನ ಮನಸ್ಸಿನ ಆಧಾರವಾಗಿದ್ದು, ಭಾರತ ಯೋಗ–ಧ್ಯಾನಿಗಳ ತವರಾಗಿದೆ ಎಂದು ಹೇಳಿದರು.
ಮುಖಂಡ ಬಸವಪ್ರಭು ಸರನಾಡಗೌಡ ಮಾತನಾಡಿ, ಯುವಕರು ಮೊಬೈಲ್, ದುಶ್ಚಟಗಳಿಂದ ದೂರವಿರಬೇಕು. ಪ್ರತಿದಿನ ಯೋಗ, ಧ್ಯಾನ ಅಭ್ಯಾಸದಿಂದ ದೈಹಿಕ–ಮಾನಸಿಕ ಆರೋಗ್ಯ ಮತ್ತು ಒತ್ತಡಮುಕ್ತ ಜೀವನ ಸಾಗಿಸಲು ಸಾಧ್ಯ ಎಂದರು.
ಸಂತ ಸದಾನಂದ ಗಿರಿ ಮಹಾರಾಜರು ‘ಮೈಂಡ್ ಟು ಮ್ಯಾಟರ್’, ತ್ರಿವೇಣಿ ಸಂಗಮ, ಅಷ್ಟಾಂಗ ಯೋಗ, ಕ್ರಿಯಾ ಯೋಗ ಹಾಗೂ ಆಯುರ್ವೇದದ ಮಹತ್ವ ವಿವರಿಸಿದರು.
ಜಿ.ಎನ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಟೆಂಗಿನಮಠದ ಮಲ್ಲಿಕಾರ್ಜುನ ದೇವರು ಮಾತನಾಡಿದರು. ಮಹಾವತಾರದ ಫೌಂಡೇಷನ್ ಸಂಸ್ಥಾಪಕ ರಂಗನಾಥ್, ಸ್ವಯಂಭೂ, ಮರ್ಮ ಹಾಗೂ ಮುದ್ರಾ ಚಿಕಿತ್ಸೆ ಕುರಿತು ವಿವರಿಸಿದರು. ರಾಜಶೇಖರ ಅಡಿಕೆನವರ, ಧ್ಯಾನದ ಮಹತ್ವ ತಿಳಿಸಿದರು. ಸರೋಜಾ ಮಲ್ಲಿಕಾರ್ಜುನ ಧ್ಯಾನ ಮಾರ್ಗದರ್ಶನ ಮಾಡಿದರು. ಪಿಪ್ಪಳ ಪ್ರಸಾದ್ ರಾವ್ ತಂಡದ ಸಂಗೀತ ಧ್ಯಾನ ಆಧ್ಯಾತ್ಮಿಕ ವಾತಾವರಣಕ್ಕೆ ಸಭಿಕರನ್ನು ಕರೆದೊಯ್ಯಿತು. ಮಲ್ಲಿಕಾರ್ಜುನ ಹವಾಲ್ದಾರ, ರಾಜಶೇಖರ ಮಲಗಿಹಾಳ ಉಪಸ್ಥಿತರಿದ್ದರು.
ವಿಶ್ವದಾದ್ಯಂತ ಹೆಚ್ಚುತ್ತಿರುವ ದ್ವೇಷ, ಹಿಂಸೆ, ಕಲಹ ಹಾಗೂ ಯುದ್ಧಗಳಿಗೆ ಅಂತ್ಯ ಕಾಣಲು ಧ್ಯಾನವೇ ದಾರಿ ಎಂಬ ಸಂದೇಶ ಸಾರಲಾಯಿತು. ಧ್ಯಾನದ ಮೂಲಕ ವ್ಯಕ್ತಿಯ ಮನಸ್ಸಿನಲ್ಲಿ ಪ್ರೀತಿ, ದಯೆ, ಕರುಣೆ, ಸಹಬಾಳ್ವೆ, ಕೃತಜ್ಞತೆ, ಕ್ಷಮೆ, ಉದಾರತೆ ಹಾಗೂ ಅಹಿಂಸೆಯ ಮೌಲ್ಯಗಳು ಮೂಡಿಬರುತ್ತವೆ ಎಂದು ತಿಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.