ADVERTISEMENT

ಈ ಸರ್ಕಾರಿ ಶಾಲೆಗೆ ದಾಖಲಾತಿಯದೇ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 9:15 IST
Last Updated 1 ಜುಲೈ 2012, 9:15 IST

ಕಂಪ್ಲಿ: ಈ ಶಾಲೆಗೆ ಸುಸುಜ್ಜಿತ ಕಟ್ಟಡ ವಿದೆ, ಸರ್ಕಾರದ ಕಡ್ಡಾಯ ಶಿಕ್ಷಣದ ಎಲ್ಲಾ ಉಚಿತ ಯೋಜನೆಗಳು ಲಭ್ಯ ವಿದ್ದು, ಇಬ್ಬರೂ ಶಿಕ್ಷಕರೂ ಇದ್ದಾರೆ. ಆದರೆ ದಾಖಲಾದ ಮಕ್ಕಳು ಗೈರು ಹಾಜರಾಗುತ್ತಿದ್ದರೆ ಮತ್ತೊಂದೆಡೆ ಮಕ್ಕಳೇ ಶಾಲೆಗೆ ದಾಖಲಾಗುತ್ತಿಲ್ಲ...!

ಪಟ್ಟಣದ ಸೋಮೇಶ್ವರ ದೇವಸ್ಥಾನ ಬಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ರೀತಿ ಚಿತ್ರಣ ಕಂಡು ಬರುತ್ತದೆ. ಶಾಲಾ ಸುತ್ತಲಿನ ಪರಿಸರ ದಲ್ಲಿ ಬಹುತೇಕ ಚೆನ್ನದಾಸರ ಅಲೆಮಾರಿ ಜನಾಂಗದವರು ಮತ್ತು ಕೃಷಿ ಕೂಲಿ ಕಾರ್ಮಿಕರು ವಾಸಿಸುತ್ತಿದ್ದು, ಮಕ್ಕಳ ಗೈರು ಹಾಜರಿಗೆ ಮತ್ತು ದಾಖಲೆ ಆಗದಿ ರುವುದಕ್ಕೆ ಪ್ರಮುಖ ಕಾರಣ ಎನ್ನುವ ಮಾತು ಕೇಳಿಬರುತ್ತಿದೆ.

ಪ್ರಸಕ್ತ ಸಾಲಿನಲ್ಲಿ 1ರಿಂದ 5ನೇ ತರಗತಿಯವರೆಗೆ ಕೇವಲ 21ಮಕ್ಕಳು ಮಾತ್ರ ಇದ್ದಾರೆ. ಅನುಪಾತ ಲೆಕ್ಕಚಾರ ಹಾಕಿದರೆ 40ಮಕ್ಕಳಿಗೆ ಒಬ್ಬರು ಶಿಕ್ಷಕರು ಎನ್ನುವ ನಿಯಮವಿದೆ. ಆದರೆ ಇಲ್ಲಿ ಎಲ್ಲವೂ ಉಲ್ಟ ಆಗಿದೆ. ಶಾಲೆಗೆ ಬರುವ ವಿದ್ಯಾರ್ಥಿಗಳಿಗಾದರೂ ಪ್ರಾಮಾಣಿಕವಾಗಿ ಕಲಿಸಬೇಕು ಎನ್ನುವ ಉದ್ದೇಶ ಹೊಂದಿರುವುದಾಗಿ ಇಬ್ಬರು ಶಿಕ್ಷಕರು ತಿಳಿಸುತ್ತಾರೆ.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಏಕೋಪಾ ಧ್ಯಾಯ ಶಾಲೆಯಾಗಿ ಕಾರ್ಯನಿರ್ವ ಹಿಸಿದ್ದ ಈ ಶಾಲೆಗೆ ಪ್ರಸಕ್ತ ವರ್ಷ ಮತ್ತೊಬ್ಬ ಶಿಕ್ಷಕರು ಬಂದಿದ್ದಾರೆ. ಆದರೆ ಶಿಕ್ಷಕರೇನೋ ಬಂದರು ಕಲಿ ಯಲು ಮಕ್ಕಳೇ ಇಲ್ಲ ಎನ್ನುವ ಕೊರಗು ಇಲ್ಲಿರುವ ಶಿಕ್ಷಕರನ್ನು ಕಾಡುತ್ತಿದೆ. 

ಶಾಲೆ ಆರಂಭಕ್ಕೂ ಮುನ್ನ ಪ್ರಭಾರ ಮುಖ್ಯಗುರು ಹನುಮಂತಪ್ಪ ಮತ್ತು ಶಿಕ್ಷಕ ಸೋಮಪ್ಪ ಮನೆ ಮನೆಗೆ ತೆರಳಿ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ. ಆದರೆ ಅಲೆಮಾರಿಗಳು, ಕೃಷಿ ಕೂಲಿ ಕಾರ್ಮಿಕರು ಹೆಚ್ಚು ವಾಸವಿರುವು ದರಿಂದ ಬಹುತೇಕ ಪಾಲಕರು ಹೊಟ್ಟೆ ಹೊರೆಯಲು ಬೆಳಿಗಿನ ಜಾವ ತೆರಳುವು ದರಿಂದ ಮಕ್ಕಳನ್ನು ಜೊತೆಗೆ ಕರೆದು ಕೊಂಡು ಹೋಗುತ್ತಾರೆ ಎನ್ನುವ ಮಾತು ದಟ್ಟವಾಗಿ ಕೇಳಿಬರುತ್ತಿದೆ.

ಈ ಬಗ್ಗೆ ಎಸ್‌ಡಿಎಂಸಿ ಅಧ್ಯಕ್ಷ ಜಗನ್ನಾಥ ಮತ್ತು ಸದಸ್ಯರು ಪಾಲಕರ ಪೋಷಕರ ಮನವೊಲಿಸಿ ಶಾಲೆಗೆ ಮಕ್ಕಳನ್ನು ಕಳುಹಿಸುವಂತೆ ಮನವಿ ಮಾಡಿಕೊಂಡಿರುವುದಾಗಿ ಹೇಳುತ್ತಾರೆ. ಜುಲೈನಲ್ಲಿ `ಶಾಲೆಗಾಗಿ ನಾವು-ನೀವು~ ಕಾರ್ಯಕ್ರಮವಿದ್ದು, ಈ ಸಂದರ್ಭದಲ್ಲಿ ಎಲ್ಲಾ ಮಕ್ಕಳ ಪೋಷಕರ ಸಭೆ ಕರೆದು ಜಾಗೃತಿ ಮೂಡಿಸಲಾಗುವುದು ಎಂದು ಹೇಳುತ್ತಾರೆ.

ಈ ಶಾಲೆಯಲ್ಲಿ 6ಸುಸಜ್ಜಿತ ಕಟ್ಟಡ ಗಳಿದ್ದು, ಸದ್ಯ 3ಕೊಠಡಿಗಳನ್ನು ಮಾತ್ರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇನ್ನು ಳಿದ ಮೇಲಂತಸ್ತಿನ ಮೂರು ಕೊಠಡಿ ಗಳನ್ನು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ವಿದ್ಯಾರ್ಥಿಗಳ ಕಲಿಕೆಗೆ ಬಿಟ್ಟು ಕೊಡಲಾ ಗಿದೆ. ಶಾಲೆಗೆ ಹೋಗಿ ಬರುವ ರಸ್ತೆ ಹಾಳಾಗಿದ್ದು, ಕೆಲ ಕಡೆ ಮುಳ್ಳು ಬೇಲಿ ಬೆಳೆದಿದೆ.

ರಸ್ತೆ ಮಣ್ಣಿನಿಂದ ಕೂಡಿದ್ದು, ಮಳೆಗಾಲದಲ್ಲಿ ರಾಡಿಯಾಗಿ ಪರಿವ ರ್ತನೆ ಯಾಗುವುದರಿಂದ ಈ ಸಂದರ್ಭ ದಲ್ಲಿ ಮಕ್ಕಳು ಶಾಲೆಗೆ ಬಂದು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಎಷ್ಟೋ ಕಡೆ ಮಕ್ಕಳಿದ್ದರೆ ಶಿಕ್ಷಕರಿಲ್ಲ ಎಂದು ಪ್ರತಿಭಟನೆಗಳು ಶುರುವಾಗಿವೆ. ಆದರೆ ಈ ಶಾಲೆಯಲ್ಲಿ ಶಿಕ್ಷಕರಿದ್ದರೂ ಮಕ್ಕಳಿಲ್ಲ ಎನ್ನುವ ಕೂಗು ಇದೆ.

ವಿಲೀನಗೊಳಿಸಲಿ: ವರ್ಷದಿಂದ ವರ್ಷಕ್ಕೆ ಈ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಸರ್ಕಾರ, ಶಿಕ್ಷಣ ಇಲಾಖೆ ಅಧಿಕಾರಿ ಗಳು ಪರಿಶೀಲಿಸಿ ಪಕ್ಕದಲ್ಲಿಯೇ ಇರುವ ಶಾಲೆಗೆ ವಿಲೀನಗೊಳಿಸುವುದು ಸೂಕ್ತ ಎನ್ನುವ ಮಾತು ವ್ಯಕ್ತವಾಗು ತ್ತಿದೆ. ಇದರಿಂದ ಸರ್ಕಾರಕ್ಕೆ ಸ್ವಲ್ಪ ಹೊರೆ ಕಡಿಮೆಯಾಗಿ ಇಲ್ಲಿರುವ ಇಬ್ಬರ ಶಿಕ್ಷಕರ ಸೇವೆ ಇನ್ನು ಹೆಚ್ಚಿನ ಮಕ್ಕಳಿಗೂ ಲಭ್ಯವಾಗುತ್ತದೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಗಂಭೀರ ಚಿಂತನೆ ನಡೆಸಿ ದಿಟ್ಟ ನಿರ್ಧಾರ ಕೈಗೊಳ್ಳಲಿ ಎನ್ನುವುದೇ ಎಲ್ಲರ ಆಶಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.