ADVERTISEMENT

ಐಸಿಡಿಎಸ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 10:35 IST
Last Updated 11 ಜುಲೈ 2013, 10:35 IST

ಬಳ್ಳಾರಿ: ಸಮಗ್ರ ಬಾಲ ವಿಕಾಸ ಯೋಜನೆ (ಐಸಿಡಿಎಸ್) ಖಾಸಗೀಕರಣ ಪ್ರಕ್ರಿಯೆಯನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯಕರ್ತೆಯರು ಬುಧ ವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ದೇಶದಲ್ಲಿ ಶೇ 80ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ, ಶೇ 50ರಷ್ಟು ಮಹಿಳೆಯರು ಹಾಗೂ ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆ ಮತ್ತು ಮಕ್ಕಳ ಸರ್ವಾಂಗೀಣ ಆರೋಗ್ಯ ಸುಧಾರಿಸುವ ಪ್ರಯತ್ನದಲ್ಲಿರುವ ಸಮಗ್ರ ಬಾಲ ವಿಕಾಸ ಯೋಜನೆಯನ್ನು ರಾಜ್ಯ ಸರ್ಕಾರವು ಖಾಸಗೀಯವರಿಗೆ ವಹಿಸುತ್ತಿರುವುದು ಖಂಡನೀಯ ಎಂದು  ಪ್ರತಿಭಟನಾಕಾರರು ಆರೋಪಿಸಿದರು.

ನಗರದ ಗಡಿಗಿ ಚೆನ್ನಪ್ಪ ವೃತ್ತದಿಂದ ಪ್ರತಿಭಟನಾ ರ‌್ಯಾಲಿ ನಡೆಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮುರು ಗಂಟೆಗಳ ಕಾಲ ಧರಣಿನಡೆಸಲಾಯಿತು.

ಐಸಿಡಿಎಸ್ ಯೋಜನೆಯನ್ನು ಪ್ರತ್ಯೇಕ ಇಲಾಖೆಗೆ ವಹಿಸಬೇಕು. ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರ ಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಸರ್ಕಾರೇತರ ಸಂಘಟನೆಗಳ ಸಹ ಪಾಲುದಾರಿಕೆಯ ಹೆಸರಿನಲ್ಲಿ ಅಥವಾ ಖಾಸಗೀ ಪಾಲುದಾರಿಕೆ ಹೆಸರಿನಲ್ಲಿ ಅಂಗನವಾಡಿ ನಡೆಸಲು ಅನುಮತಿ ನೀಡಬಾರದು. ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ, ಕನಿಷ್ಠ ವೇತನ ಹೆಚ್ಚಿಸಿ, ಭವಿಷ್ಯನಿಧಿ ಹಾಗೂ ಸಾಮಾಜಿಕ ಭದ್ರತೆ ಒದಗಿಸ ಬೇಕು. ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸಬೇಕು ಎಂಬ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಅವರಿಗೆ ಸಲ್ಲಿಸಲಾಯಿತು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಕೆ.ನಾಗರತ್ನಮ್ಮ, ಆರ್.ಎಸ್. ಬಸವ ರಾಜ್, ಪ್ರಧಾನ ಕಾರ್ಯದರ್ಶಿ ಎಂ. ಎರ‌್ರೆಮ್ಮ, ಉಪಾಧ್ಯಕ್ಷರಾದ ಲೀಲಾವತಿ, ಉಮಾದೇವಿ, ಸಾವಿತ್ರಮ್ಮ, ಸುಮಂಗಲಾ, ವರಲಕ್ಷ್ಮಿ, ಜೆ.ಸತ್ಯಬಾಬು ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕುಗಳ 600ಕ್ಕೂ ಅಧಿಕ ಕಾರ್ಯಕರ್ತೆಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.