ಹೊಸಪೇಟೆ: `ಮತದಾನ ನಮ್ಮ ಹಕ್ಕು' ಅದನ್ನು ಚಲಾಯಿಸಬೇಕು, ಚಲಾಯಿಸಲು ನನ್ನ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂಬುವುದನ್ನು ಪರೀಕ್ಷಿಸಿಕೊಳ್ಳಬೇಕು' ಎಂಬ ಸಂದೇಶಗಳನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಂಪಿ ಸಮೀಪದ ಕಡ್ಡಿರಾಮಪುರದಲ್ಲಿ ಚಿತ್ತಾಕರ್ಷಕ ರಂಗೋಲಿಯ ಅರಳಿಸುವ ಮೂಲಕ ಪ್ರಚಾರ ಆಂದೋಲನ ಹಮ್ಮಿಕೊಂಡಿತ್ತು.
ಮತದಾನದ ದಿನ ಮತಪಟ್ಟಿಯಲ್ಲಿ ನನ್ನ ಹೆಸರಿಲ್ಲಾ. ಕಳೆದ ಚುನಾವಣೆಯಲ್ಲಿ ನನ್ನ ಹೆಸರಿತ್ತು. ಇಗೇಕಿಲ್ಲಾ, ಎಂಬಲ್ಲಾ ಗೊಂದಲಗಳು ಸಾಮಾನ್ಯವಾಗುತ್ತಿದ್ದು, ಅವುಗಳನ್ನು ತಪ್ಪಿಸಲು ಮತ್ತು ಇಂತಹ ಜನಜಾಗೃತಿಯ ಪ್ರಚಾರವನ್ನು ಹಮ್ಮಿಕೊಂಡಿತ್ತು. ಗ್ರಾಮದಾದ್ಯಂತ ರಂಗೋಲಿ ಹಾಕುವ ಮೂಲ ಜನಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.
`ರಂಗೋಲಿ ಹಾಕುತ್ತಾ ಜನರಿಗೆ ವಿಷಯ ತಿಳಿಸಿದ್ದು, ಮನ್ಸನ್ಯಾಗ ಉಳಿತೈತೆ ಹಿಂಗಾ ಎಲ್ಲಾ ತಿಳಿಸೋ ಕೆಲಸ್ಸಾ ಸರ್ಕಾರ ಮಾಡ್ಲಿ' ಅಂತ ತನ್ನ ಅನಿಸಿಕೆ ಹಂಚಿಕೊಂಡ್ರು ಗ್ರಾಮದ ಲಕ್ಕಿಬಾಯಿ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗ್ರಾಮ ಗ್ರಾಮಗಳಲ್ಲಿ ಮಹಿಳಾ ಸಂಘಗಳನ್ನು ರಚಿಸಿದ್ದು, ಇಂತಹ ಸಂಘಗಳು ಮತ್ತು ಅಂಗವಾಡಿ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸಿದ್ದಾದರೆ ಪರಿಣಾಮಕಾರಿಯಾಗಲಿದೆ ಎಂದು ಕಾರ್ಯಕ್ರಮ ರೂಪಿಸಿರುವುದಾಗಿ ಹೇಳುತ್ತಾರೆ ಇಲಾಖಾಧಿಕಾರಿ ಎಂ. ಎಂ. ಮಂಜುನಾಥಸ್ವಾಮಿ.
`ಸಮಾಜದ ಕಟ್ಟಕಡೆಯ ಮನುಷ್ಯನು ಜಾಗೃತರಾಗಬೇಕು' ಎಂಬುವುದಾದರೆ ವಿಭಿನ್ನವಾಗಿ ಪ್ರಚಾರಾಂದೋಲ ಹಮ್ಮಿಕೊಳ್ಳಬೇಕು ಎಂದು ಯೋಚಿಸಿ ಯೋಜನೆ ರೂಪಿಸಲಾಗಿದೆ ಆರೋಗ್ಯಕರ ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ಯಶಸ್ವಿಗೊಳಿಸುವ ಕಾರ್ಯ ಮಾಡತ್ತಿದೆ' ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ನಾಯಕ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.