ADVERTISEMENT

ಕುಡಿಯುವ ನೀರು ಪೂರೈಕೆಗೆ ಶಾಶ್ವತ ಕ್ರಮ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 5:25 IST
Last Updated 1 ಜೂನ್ 2011, 5:25 IST

ಬಳ್ಳಾರಿ: ನಗರದ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಶಾಶ್ವತ ಕುಡಿಯುವ ನೀರು ಸರಬರಾಜು ಅಭಿವೃದ್ಧಿ ಯೋಜನೆ ಜಾರಿಗೆ ತರಲಾಗಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ತಾಲ್ಲೂಕಿನ ಮೋಕ ರಸ್ತೆಯಲ್ಲಿರುವ ಶಿವಪುರ ಗ್ರಾಮದ ಬಳಿ ಸೋಮವಾರ ರೂ 98.66 ಕೋಟಿ ವೆಚ್ಚದಲ್ಲಿ ಬಳ್ಳಾರಿ ನಗರದ ಕುಡಿಯುವ ನೀರು ಸರಬರಾಜು ಅಭಿವೃದ್ಧಿ ಯೋಜನೆಯ ಕಾಮಗಾರಿಗೆ ಶಂಕುಸ್ಥಾಪನೆ ನೆರೆವೇರಿಸಿದ ಬಳಿಕ ಅವರು ಮಾತನಾಡಿದರು.

ಮುಂದಿನ 15 ವರ್ಷಗಳ ಜನಸಂಖ್ಯೆಯನ್ನು ಅಂದಾಜಿಸಿ ಈ ಕಾಮಗಾರಿ ಆರಂಭಿಸಲಾಗುತ್ತಿದೆ. ಸಂಗನಕಲ್ಲು ಘಟಕದಿಂದ ಶುದ್ಧೀಕರಿಸಿದ ನೀರನ್ನು ನಾರಾಯಣರಾವ್ ಪಾರ್ಕ್‌ನಲ್ಲಿರುವ ಜಲ ಸಂಗ್ರಹಗಾರಕ್ಕೆ ಸಾಗಿಸುವ ಯಂತ್ರಗಳು ಹಾಗೂ ಪೈಪ್ ಅಳವಡಿಸಲಾಗುವುದು ಎಂದು ಅವರು ಹೇಳಿದರು.

ಪಾಲಿಕೆಯಿಂದ ಈಗಾಗಲೇ ನಗರದ ಒಟ್ಟು 27 ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ  ಅನುದಾನ ಬಿಡುಗಡೆಯಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ ಎಂದರು.

ಬಳ್ಳಾರಿ ನಗರದ ರಸ್ತೆ, ಕುಡಿಯುವ ನೀರು ವ್ಯವಸ್ಥೆ ಸುಧಾರಿಸಲಾಗಿದ್ದು,  ಅನೇಕ ಅಬಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಬಳ್ಳಾರಿಯನ್ನು ಸುಂದರ ಹಾಗೂ ಸ್ವಚ್ಛ ನಗರವನ್ನಾಗಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಶಾಸಕ ಜಿ.ಸೋಮಶೇಖರರೆಡ್ಡಿ ಕೋರಿದರು.

ಸಂಸದೆ ಜೆ. ಶಾಂತ, ಶಾಸಕ ಮೃತ್ಯುಂಜಯ ಜಿನಿಗಾ, ಜಿ.ಪಂ. ಅಧ್ಯಕ್ಷೆ ಅರುಣಾ, ಮೇಯರ್ ಪಾರ್ವತಿ, ಉಪಮೇಯರ್ ಶಶಿಕಲಾ, ಸ್ಥಾಯಿ ಸಮಿತಿ ಅಧ್ಯಕ್ಷ ಗೋನಾಳ್ ರಾಜಶೇಖರಗೌಡ, ಪೌರಾಯುಕ್ತ ಡಿ.ಎಲ್. ನಾರಾಯಣ್,  ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.