ADVERTISEMENT

ಗಾಳಿ, ಮಳೆ: ಬಾಳೆ, ಎಲೆ ತೋಟಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 26 ಮೇ 2018, 9:12 IST
Last Updated 26 ಮೇ 2018, 9:12 IST
ಸಂಡೂರಿನ ಗಡಂಬ್ಲಿ ಷಣ್ಮುಖಪ್ಪನವರ ಎಲೆ ತೋಟದಲ್ಲಿನ ಎಲೆ ಬಳ್ಳಿಗಳು ನೆಲಕ್ಕೊರಗಿವೆ
ಸಂಡೂರಿನ ಗಡಂಬ್ಲಿ ಷಣ್ಮುಖಪ್ಪನವರ ಎಲೆ ತೋಟದಲ್ಲಿನ ಎಲೆ ಬಳ್ಳಿಗಳು ನೆಲಕ್ಕೊರಗಿವೆ   

ಸಂಡೂರು: ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ಗಾಳಿ ಮತ್ತು ಮಳೆಗೆ ವಿವಿಧೆಡೆ ಬಾಳೆ ಹಾಗೂ ಎಲೆ ತೋಟಗಳಿಗೆ ಹಾನಿಯಾಗಿದೆ.

ತಾಲ್ಲೂಕಿನ ವೆಂಕಟಗಿರಿಯ ಸ್ವಾಮಿನಾಯ್ಕ ಅವರ 250, ವೆಂಕಾನಾಯ್ಕ ಅವರ 200, ರೆಡ್ಡಿ ನಾಯ್ಕ ಅವರ 150, ಬಾಬುನಾಯ್ಕ ಅವರ 250, ಸುಶೀಲಾನಗರ ಬಳಿಯ ರಾಧಾನಗರ ಭಾಗದ ತಾವರೆನಾಯ್ಕ ಅವರ 250 ಹಾಗೂ ಅಲ್ಲಾಭಕ್ಷಿಯವರ ತೋಟದಲ್ಲಿನ 400 ಬಾಳೆ ಗಿಡಗಳು ನೆಲಕ್ಕುರುಳಿವೆ. ಪಟ್ಟಣದ ಹಗರಿ ಬಸವರಾಜಪ್ಪ, ಗಡಂಬ್ಲಿ ಷಣ್ಮುಖಪ್ಪ, ಸಿದ್ದಪ್ಪ, ಚಂದ್ರೇಗೌಡರ ‌ಎಲೆ ತೋಟಗಳಿಗೆ ಹಾನಿಯಾಗಿದೆ.

ಭುಜಂಗನಗರ ಮಾರ್ಗದಲ್ಲಿನ ಗಡಂಬ್ಲಿ ಷಣ್ಮುಖಪ್ಪನವರ ತೋಟದಲ್ಲಿನ ದನದ ಕೊಟ್ಟಿಗೆ ಚಾವಣಿಗೆ ಹಾಕಿದ್ದ ತಗಡುಗಳು ಗಾಳಿಗೆ ಹಾರಿವೆ. ಪಟ್ಟಣದ ಗೌಳೇರ ಓಣಿಯಲ್ಲಿ ಎರಡು ತೆಂಗಿನ ಮರಗಳು ವೆಂಕಣ್ಣ ಘೋಡ್ಕೆ ಎಂಬವರ ಮನೆ ಮೇಲೆ ಬಿದ್ದಿವೆ.

ADVERTISEMENT

ಬಿರುಗಾಳಿಗೆ ಪಟ್ಟಣದಲ್ಲಿ 30ಕ್ಕೂ ಹೆಚ್ಚು ಮರಗಳು ಹಾಗೂ 19 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇಡೀ ಪಟ್ಟಣದಲ್ಲಿ 21 ತಾಸು ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು.

ಬಿರುಗಾಳಿಯಿಂದಾಗಿ ಫಲಕೊಡುವ ಹಂತದಲ್ಲಿರುವ ಬಾಳೆ, ಎಲೆ ತೋಟಗಳಿಗೆ ಹೆಚ್ಚಿನ ಹಾನಿ ಉಂಟು ಮಾಡುತ್ತಿದೆ. ಕಂದಾಯ, ತೋಟಗಾರಿಕೆ, ಪುರಸಭೆ ಹಾಗೂ ಜೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾನಿಗೀಡಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.