ADVERTISEMENT

ಚೇಳ್ಳಗುರ್ಕಿ: ಸಂಭ್ರಮದ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 6:15 IST
Last Updated 8 ಜೂನ್ 2011, 6:15 IST

ಬಳ್ಳಾರಿ: ಆಂಧ್ರದ ಗಡಿ ಭಾಗದಲ್ಲಿರುವ ತಾಲ್ಲೂಕಿನ ಚೇಳ್ಳಗುರ್ಕಿ ಗ್ರಾಮದಲ್ಲಿ ಅವಧೂತ ಎರ‌್ರಿತಾತ ಸ್ವಾಮೀಜಿ ಅವರ ಬ್ರಹ್ಮರಥೋತ್ಸವವು ಶ್ರದ್ಧಾಭಕ್ತಿಗಳಿಂದ ನಡೆಯಿತು.

ಶತಮಾನದ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಬ್ರಿಟಿಷ್ ಸರ್ಕಾರದಲ್ಲಿ ತಹಸೀಲ್ದಾರರಾಗಿ ಕಾರ್ಯ ನಿರ್ವಹಿಸುತಿದ್ದ ನಂಜುಂಡಯ್ಯ ಎಂಬುವವರು ಬ್ರಿಟಿಷ್ ಆಡಳಿತ ಕಾರ್ಯವೈಖರಿಗೆ ಬೇಸತ್ತು ವೈರಾಗ್ಯದಿಂದ ಬಳ್ಳಾರಿ ತಾಲ್ಲೂಕಿನ ಚೇಳ್ಳಗುರ್ಕಿಗೆ ಬಂದು, ಆಂಧ್ರ ಮತ್ತು ಕರ್ನಾಟಕದ ಹಲವು ಗ್ರಾಮಗಳ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅನೇಕ ಪವಾಡಗಳನ್ನು ನಡೆಸಿ ಭಕ್ತರ ಹೃನ್ಮನಗಳಲ್ಲಿ ಎರ‌್ರಿತಾತ ಎಂದೇ ನೆಲೆಗೊಂಡರು.

ಸುಕ್ಷೇತ್ರ ಚೇಳ್ಳಗುರ್ಕಿಯಲ್ಲಿ ಅವಧೂತ ಎರ‌್ರಿ ಸ್ವಾಮಿಯವರು 1922ರಲ್ಲಿ ಜೀವ ಸಮಾಧಿಯಾಗಿದ್ದು, ಆಂಧ್ರ ಹಾಗೂ ಕರ್ನಾಟಕದ ಭಕ್ತರ ಆರಾಧ್ಯ ದೈವವಾಗಿದ್ದಾರೆ. ನಿತ್ಯವೂ ಚೇಳ್ಳಗುರ್ಕಿಯಲ್ಲಿರುವ ದೇವಸ್ಥಾನಕ್ಕೆ ಭಕ್ತರು ಭೇಟಿ ನೀಡಿ ದರ್ಶನ ಪಡೆಯುತ್ತಾರೆ.

ಪ್ರತಿವರ್ಷ ನಡೆಯುವ ರಥೋತ್ಸವಕ್ಕೆ ಉಭಯ ರಾಜ್ಯಗಳ ಸಾವಿರಾರು ಭಕ್ತರು ಪಾಲ್ಗೊಳ್ಳುವುದು ವಿಶೇಷ. ಸ್ವಾಮಿಯ ಮೂರ್ತಿಯನ್ನು ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ತಂದು 50 ಅಡಿ ಎತ್ತರದ ಬ್ರಹ್ಮ ರಥದಲ್ಲಿ ಪ್ರತಿಷ್ಠಾಪಿಸಿ ವಿವಿಧ ಜಾನಪದ ವಾದ್ಯಗಳ ಆಕರ್ಷಕ ಮೆರವಣಿಗೆಯೊಂದಿಗೆ ರಥ ಎಳೆದ ಭಕ್ತರು, ಹೂ ಹಣ್ಣು ಎಸೆದು ಭಕ್ತಿಯನ್ನು ಸಮರ್ಪಿಸಿದರು.

ನವದಂಪತಿ ರಥೋತ್ಸವ ವೀಕ್ಷಿಸಿದರೆ ಸುಖ ಸಂಸಾರ, ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ  ನಂಬಿಕೆ ಇರುವುದರಿಂದ ಅನೇಕ ಹೊಸಜೋಡಿಗಳು ಅಧಿಕ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿದ್ದರು.ಆಂಧ್ರದ ನೂರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.