ADVERTISEMENT

ತಾಂಡಾದಲ್ಲಿ ಮಕ್ಕಳ ಕಳ್ಳರ ವದಂತಿ

​ಪ್ರಜಾವಾಣಿ ವಾರ್ತೆ
Published 19 ಮೇ 2018, 9:35 IST
Last Updated 19 ಮೇ 2018, 9:35 IST

ಕೂಡ್ಲಿಗಿ: ತಾಲ್ಲೂಕಿನ ಬಂಡೇಬಸಾಪುರ ತಾಂಡಾದಲ್ಲಿ ಮಕ್ಕಳ ಅಪಹರಣಕಾರರು ಬಂದಿದ್ದಾರೆ ಎಂದು ಸುದ್ದಿ ಹರಡಿದ್ದು, ಪಟ್ಟಣ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಶುಕ್ರವಾರ ಆತಂಕ ಸೃಷ್ಟಿಯಾಯಿತು.

‘ಕೂಡ್ಲಿಗಿಯಿಂದ 5 ಕಿ.ಮೀ ದೂರದ ಲ್ಲಿರುವ ಬಂಡೇಬಸಾಪುರ ತಾಂಡಾದಲ್ಲಿ ನಾಲ್ಕೈದು ಜನ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಜೀಪಿನಲ್ಲಿ ಬಂದಿದ್ದರು. ಅವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಯುವಕನೊಬ್ಬ ಹೇಳಿದ್ದಾನೆ.

ಯುವಕ ಹೇಳಿದ ಸುದ್ದಿ ಶಿವಪುರ, ಕೈವಲ್ಯಾಪುರ ಗ್ರಾಮಗಳಲ್ಲಿ ಹರಡಿ ಜನರಲ್ಲಿ ಆತಂಕ ಉಂಟು ಮಾಡಿತು. ಕೂಡ್ಲಿಗಿ ಪೊಲೀಸರು ತಕ್ಷಣ ಬಂಡೇಬಸಾಪುರ ತಾಂಡಾಕ್ಕೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

‘ಯುವಕ ಸಾಲ ಮಾಡಿಕೊಂಡಿ ರಬೇಕು. ಸಾಲ ವಸೂಲಿಗೆ ಬಂದವರನ್ನೇ ಕಳ್ಳರು ಎಂದು ಭಾವಿಸಿದ್ದಾನೆ. ಸಾಲ ಮರೆಮಾಚಲು ತಂತ್ರ ಹೂಡಿರುವ ಶಂಕೆ ಇದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮಾನಸಿಕ ಅಸ್ವಸ್ಥಗೆ ಥಳಿತ

ಹೊಸಪೇಟೆ: ಮಕ್ಕಳ ಕಳ್ಳ ಎಂದು ಶಂಕಿಸಿ ಮಾನಸಿಕ ಅಸ್ವಸ್ಥನನ್ನು ಇಲ್ಲಿನ ಎಂ.ಜೆ.ನಗರದ 12ನೇ ಅಡ್ಡರಸ್ತೆಯಲ್ಲಿ ಶುಕ್ರವಾರ ಜನ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆಂಧ್ರಪ್ರದೇಶದಿಂದ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಜಿಲ್ಲೆಯಾದ್ಯಂತ ವದಂತಿ ಹರಡಿದೆ. ಇದು ಸುಳ್ಳು ಸುದ್ದಿ. ಯಾರು ಅದಕ್ಕೆ ಕಿವಿಗೊಡಬಾರದು ಎಂದು ಪೊಲೀಸ್‌ ಇಲಾಖೆಯಿಂದ ಹೇಳಿದರೂ ಜನ ನಂಬುತ್ತಿಲ್ಲ.

‘ಎಂ.ಜೆ.ನಗರದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಓಡಾಡುತ್ತಿದ್ದ. ಈತನೇ ಮಕ್ಕಳ ಕಳ್ಳ ಇರಬಹುದು ಎಂದು ಥಳಿಸಲಾಗಿದೆ. ಆತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದೇವೆ. ಹೆಸರು, ಊರು ಏನು ತಿಳಿದುಬಂದಿಲ್ಲ. ಗಂಭೀರವಾಗಿ ಗಾಯಗೊಂಡಿದ್ದ ಆತನಿಗೆ ಚಿಕಿತ್ಸೆ ನೀಡಿ ಕಳಿಸಿದ್ದೇವೆ’ ಎಂದು ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.