ADVERTISEMENT

ದ್ವಿತೀಯ ಘಟಕಾರಂಭಕ್ಕೆ ಕಲ್ಲಿದ್ದಲೇ ಇಲ್ಲ!

ಪ್ರಜಾವಾಣಿ ವಿಶೇಷ
Published 17 ಮಾರ್ಚ್ 2012, 8:15 IST
Last Updated 17 ಮಾರ್ಚ್ 2012, 8:15 IST

ಬಳ್ಳಾರಿ: ರಾಜ್ಯ ಎದುರಿಸುತ್ತಿರುವ ವಿದ್ಯುತ್ ಕೊರತೆ ನೀಗಿಸಲು ತಾಲ್ಲೂಕಿನ ಕುಡುತಿನಿ ಗ್ರಾಮದ ಬಳಿ ಇರುವ ಬಳ್ಳಾರಿ ಶಾಖೋತ್ಪನ್ನ ಘಟಕದಲ್ಲಿ (ಬಿಟಿಪಿಎಸ್) ಕೈಗೆತ್ತಿಕೊಳ್ಳಲಾಗಿರುವ ದ್ವಿತೀಯ ಘಟಕದ ಕಾಮಗಾರಿ ಪೂರ್ಣಗೊಂಡು ತಿಂಗಳುಗಳೇ ಕಳೆದರೂ, ಕೇಂದ್ರ ಸರ್ಕಾರ ಕಲ್ಲಿದ್ದಲು ನೀಡದಿರುವು ದರಿಂದ ವಿದ್ಯುತ್ ಉತ್ಪಾದನೆ ಮರೀಚಿಕೆಯಾಗಿದೆ.

ದ್ವಿತೀಯ ಘಟಕದ ದೀಪ ಪ್ರಜ್ವಲನ ಪ್ರಕ್ರಿಯೆ ಆರು ತಿಂಗಳ ಹಿಂದೆಯೇ ಪೂರ್ಣಗೊಂಡಿದ್ದು, ಆಯಿಲ್ ಸಿಂಕ್ರನೈಸೇಷನ್ ಮೂಲಕ ಪ್ರಾಯೋಗಿಕ ವಿದ್ಯುತ್ ಉತ್ಪಾದನಾ ಪ್ರಕ್ರಿಯೆಯೂ ಪೂರ್ಣಗೊಂಡಿದೆ.

ನಿಗದಿಯಂತೆ ಡಿಸೆಂಬರ್ ಅಂತ್ಯಕ್ಕೆ ಪೂರ್ಣ ಪ್ರಮಾಣ ದಲ್ಲಿ ಆರಂಭವಾಗಬೇಕಿದ್ದ ವಿದ್ಯುತ್ ಉತ್ಪಾದನೆ ಕಾಮಗಾರಿಯ ವಿಳಂಬ ದಿಂದ ಮೂರು ತಿಂಗಳು ಮುಂದಕ್ಕೆ ಹೋಗಿತ್ತು. ಈಗ ಕಲ್ಲಿದ್ದಲು ಪೂರೈಕೆ ಕಾರಣ ಸೇರಿಕೊಂಡಿದೆ.

500 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಮೊದಲ ಘಟಕಕ್ಕೆ ನಿತ್ಯ ಸುಮಾರು 7,000 ಟನ್ ಕಲ್ಲಿದ್ದಲು ಅದನ್ನು ಮಹಾರಾಷ್ಟ್ರದ ನಾಗಪುರದ ಬಳಿ ಇರುವ ಗಣಿಗಳಿಂದ ಬರುತ್ತಿದೆ. ದ್ವಿತೀಯ ಘಟಕಕ್ಕೆ ಒಡಿಶಾದ ಮಹಾನದಿ ಗಣಿ ಪ್ರದೇಶದಿಂದ ಕಲ್ಲಿದ್ದಲು ಪೂರೈಕೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಆದರೆ, ಕೇಂದ್ರ ಸರ್ಕಾರ ಇದಕ್ಕೆ ಇನ್ನೂ ಅನುಮತಿ  ನೀಡದಿರುವ ಕಾರಣ ಈವರೆಗೆ ಕಲ್ಲಿದ್ದಲು ಪೂರೈಕೆ ಆಗಿಲ್ಲ ಎಂದು ಬಿಟಿಪಿಎಸ್ ಅಧಿಕಾರಿಗಳು ಹೇಳುತ್ತಾರೆ.

ಇತ್ತೀಚೆಗಷ್ಟೇ ನವದೆಹಲಿಗೆ ಭೇಟಿ ನೀಡಿದ್ದ ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವರೊಂದಿಗೆ ಚರ್ಚಿಸಿ, ಪೂರ್ಣ ಪ್ರಮಾಣದಲ್ಲಿ ಕಲ್ಲಿದ್ದಲು ಒದಗಿಸುವಂತೆ ಮನವಿ ಮಾಡಿದ್ದು, ಕೆಲವೇ ದಿನಗಳಲ್ಲಿ ಬೇಡಿಕೆ ಈಡೇರುವ ಸಾಧ್ಯತೆ ಇದೆ ಎಂದು ಕರ್ನಾಟಕ ವಿದ್ಯುತ್ ನಿಗಮದ ಮೂಲಗಳು ಹೇಳುತ್ತವೆ.

ಬಿಟಿಪಿಎಸ್ ಆವರಣದಲ್ಲೇ ರೂ 3,100 ಕೋಟಿ ವೆಚ್ಚದ ಮೂರನೇ ಘಟಕದ ಕಾಮಗಾರಿಯನ್ನೂ ಕೈಗೆತ್ತಿ ಕೊಳ್ಳಲಾಗಿದ್ದು, ಮುಂದಿನ ಎರಡು ವರ್ಷದ ಅವಧಿಯಲ್ಲಿ ಮತ್ತೆ 700 ಮೆಗಾವಾಟ್ ಸಾಮರ್ಥ್ಯದ ಘಟಕ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.