ADVERTISEMENT

ಭರದಿಂದ ಸಾಗಿದ ವರ್ತುಲ ರಸ್ತೆ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2011, 11:00 IST
Last Updated 5 ಜನವರಿ 2011, 11:00 IST

ಹೊಸಪೇಟೆ: ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಅನಂತಶಯನ ಗುಡಿ ರೈಲ್ವೆ ಗೇಟ್‌ನಿಂದ ಕನಕದಾಸರ ವೃತ್ತದ ಮೂಲಕ ಡ್ಯಾಂ ರಸ್ತೆಯನ್ನು ಸಂಪರ್ಕಿಸುವ ವರ್ತುಲ ರಸ್ತೆ (ರಿಂಗ್ ರೋಡ್) ಕಾಮಗಾರಿ ಭರದಿಂದ ಸಾಗಿದೆ. ನಗರದ ಉತ್ತರಾದಿಮಠದ ಹಿಂಬದಿ ಮೂಲಕ ಅಮರಾವತಿ ಮಾರ್ಗದ ಡ್ಯಾಂ ರಸ್ತೆಯನ್ನು ಸಂಪರ್ಕಿಸುವ ರಿಂಗ್ ರಸ್ತೆ ಕಾಮಗಾರಿ ಬಹಳಷ್ಟು ಹಿಂದೆಯೇ ನಿರ್ಮಾಣ ಆಗಬೇಕಾಗಿತ್ತು. ರಿಂಗ್ ರಸ್ತೆ ನಿರ್ಮಾಣಕ್ಕೆ ಕಳೆದ ಕೆಲ ವರ್ಷಗಳಿಂದ ಒಂದಿಲ್ಲ ಒಂದು ಅಡಚಣೆ ಮತ್ತು ಹಿಂದಿನ ಸರ್ಕಾರ ಹಾಗೂ ಅಧಿಕಾರಿ ಗಳ ಇಚ್ಛಾಶಕ್ತಿ ಕೊರತೆಯಿಂದ ಮುಂದೂಡತ್ತಲೇ ಸಾಗಿತ್ತು.

ರಸ್ತೆ ನಿರ್ಮಾಣಕ್ಕಾಗಿ ಬೇಕಾಗುವ ಭೂ ಸ್ವಾಧೀನ ಪ್ರಕ್ರಿಯೆ ಸಹ ಬಹುದಿನಗಳ ಹಿಂದೆಯೇ ಮುಗಿದು ರಸ್ತೆಯ ಎರಡು ಬದಿಯಲ್ಲಿನ ಭೂ ಮಾಲೀಕರಿಗೆ ಪರಿಹಾರವನ್ನು ನೀಡಲಾಗಿತ್ತು. ಕಳೆದ ಕೆಲ ವರ್ಷಗಳ ಹಿಂದೆ ಜಿಲ್ಲೆಯ ಪ್ರತಿಷ್ಠಿತ ಜಿಂದಾಲ್ ಸಂಸ್ಥೆಯು ರಸ್ತೆ ನಿರ್ಮಾಣ ಮತ್ತು ಉಸ್ತುವಾರಿ ವಹಿಸಿ ರಸ್ತೆ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಟೋಲ್ ಮೂಲಕ ಸಂಗ್ರಹಿಸುವ ಕುರಿತು ಕಾರ್ಯಾಗಾರ ನಡೆಸಲಾಗಿತ್ತು. ಆಗಿನ ಜಿಲ್ಲಾಧಿಕಾರಿ ಅರವಿಂದ ಶ್ರೀವಾಸ್ತವ ಸೇರಿದಂತೆ ಇದಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಆದರೆ ರಸ್ತೆ ನಿರ್ಮಾಣವನ್ನು ಖಾಸಗಿ ಸಂಸ್ಥೆಯಾದ ಜೆ.ಎಸ್.ಡಬ್ಲ್ಯೂ ಸಂಸ್ಥೆಗೆ ವಹಿಸಿಕೊಡಲು ಹಿಂದೇಟು ಹಾಕಲಾಯಿತು. ಪ್ರಸ್ತುತ ರಿಂಗ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಆನಂದ್‌ಸಿಂಗ್ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪರಮೇಶ್ವರ ರೆಡ್ಡಿ ಅವರ ಆಸಕ್ತಿಯಿಂದ ಕಾಮಗಾರಿ ಭರದಿಂದ ಸಾಗುತ್ತಿದೆ.

ಈ ರಿಂಗ್ ರಸ್ತೆ ನಿರ್ಮಾಣದಿಂದ ದೇಶ, ವಿದೇಶಗಳಿಂದ ವಿಶ್ವ ಪ್ರಸಿದ್ಧ ಹಂಪಿ ಕ್ಷೇತ್ರಕ್ಕೆ ಭೇಟಿ ನೀಡುವ ಪ್ರವಾಸಿಗರು ಈ ರಸ್ತೆ ಮೂಲಕ ನೇರವಾಗಿ ನಗರದ ಒಳಗಡೆ ಪ್ರವೇಶಿಸದೆ ರಾಷ್ಟ್ರೀಯ ಹೆದ್ದಾರಿ ಯನ್ನು ಸಂಪರ್ಕಿಸಬಹುದು. ಇದರಿಂದ ಬಹಳಷ್ಟು ಟ್ರಾಫಿಕ್ ಸಮಸ್ಯೆ ಬಗೆಹರಿಯಲಿದೆ. ಈ ರಿಂಗ್ ರಸ್ತೆ ನಿರ್ಮಾಣದಿಂದ ನಗರದಲ್ಲಿನ ಭೂಮಿಯ ಬೆಲೆ ಹೆಚ್ಚಾಗಲಿದೆ. ನಗರದ ಮೇನ್ ಬಜಾರ್ ಮುಖ್ಯ ರಸ್ತೆಯಲ್ಲಿ ನಿರ್ಮಾಣ ಆಗುತ್ತಿರುವ ಯುಜಿಡಿ ಒಳಚರಂಡಿಯೂ ಇಲ್ಲಿಯೇ ಹಾದು ಹೋಗಲಿದೆ. ಒಟ್ಟಿನಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ಹೊಸಶಕೆ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.