ADVERTISEMENT

ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಮೇ 2012, 5:40 IST
Last Updated 1 ಮೇ 2012, 5:40 IST

ಹೊಸಪೇಟೆ: ಮಕ್ಕಳ ಮನಸ್ಸು ಅರಳುವ ಹೂನಂತಿದ್ದು, ತಮ್ಮ ಕಲ್ಪನೆಯ ಲೋಕದಲ್ಲಿ ವಿವಿಧ  ಬಗೆಯ ಬಣ್ಣದ ಚಿತ್ತಾರಗಳನ್ನು ಕಾಣುವಂತಹ ಮಕ್ಕಳಿಗೆ ಚಿನ್ನರ ಲೋಕ ಬಣ್ಣದ ಲೋಕ ಎಂದು ಮಕ್ಕಳ ಬೇಸಿಗೆ ಶಿಬಿರವನ್ನು ನಡೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹಿರಿಯ ರಂಗಕರ್ಮಿ ಲಾಡ್ ಸಾಬ್ ಹುಸೇನ್ ಅಮೀನಗಡ ಹೇಳಿದರು.

ಈಚೆಗೆ ನಗರದ ಸಿದ್ದಲಿಂಗಪ್ಪ ಚೌಕಿಯ ಭಾವೈಕ್ಯತಾ ವೇದಿಕೆಯ ರಂಗ ವೇದಿಕೆಯಲ್ಲಿ ರಂಗಾಯಣ ಬಾಲವಿಕಾಸ ಕೇಂದ್ರ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ  `ಚಿನ್ನರ ಲೋಕ ಬಣ್ಣದ ಲೋಕ~  ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
 
ಬಿಡುವಿನ ದಿನಗಳಲ್ಲಿ ಮಕ್ಕಳಿಗೆ ಇಂತಹ ಶಿಬಿರಗಳನ್ನು ನಡೆಸುವುದರಿಂದ ಮಕ್ಕಳ ಪ್ರತಿಭೆಗಳನ್ನು ಹೊರ ಹಾಕಲು ಸಾಧ್ಯವಾಗುತ್ತದೆ, ಮಕ್ಕಳ ಮನಸ್ಸು ಅರಳುವ ಹೂನಂತಿದ್ದು ಅವರ ಕಲ್ಪನೆಯ ಚಿತ್ರಗಳನ್ನು ಬಿಡಿಸಲು ತರಬೇತಿ ನೀಡಿದರೆ ಅವರಲ್ಲಿರುವ ಪ್ರತಿಭೆಗೆ ಪ್ರೋತಾಹಿಸಿದಂತಾಗುತ್ತದೆ ಎಂದರು.

ನಾನು ಮೂಲತಃ ವೃತ್ತಿ ರಂಗಭೂಮಿ ಯಿಂದ ಬಂದಿದ್ದು, ಹಾಸ್ಯ, ಸ್ತ್ರೀ ಪಾತ್ರ ಮತ್ತು ಕಳನಾಯಕ ಸೇರಿದಂತೆ ನೂರಾರು ನಾಟಕಗಳಲ್ಲಿ ಅಭಿನಯಿಸಿ ಕಹಿ ಸಿಹಿ ನೆಪುಗಳನ್ನು ನೆರೆದ ಮಕ್ಕಳ ಮುಂದೆ ಬಿಚ್ಚಿಟ್ಟರು.

ಭಾವೈಕ್ಯ ವೇದಿಕೆಯ ಸಂಚಾಲಕ ಪಿ. ಅಬ್ದುಲ್ ಸಾಬ್ ಮಾತನಾಡಿ ಭಾವೈಕ್ಯತಾ ವೇದಿಕೆಯಿಂದ ಬೀದಿ ನಾಟಕ ಗಳನ್ನಾಡುತ್ತಾ ಜನರಲ್ಲಿ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮ ಗಳನ್ನು ಕಳೆದ 25 ವರ್ಷಗಳಿಂದ ಮಾಡುತ್ತಾ ಬಂದಿರುವುದಾಗಿ ತಿಳಿಸಿದರು. ಪತ್ರಕರ್ತ ಕೆ.ಲಕ್ಷ್ಮಣ, ಭಾವೈಕ್ಯತಾ ವೇದಿಕೆಯ ಶಿಕ್ಷಕಿ ಸಹರಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ, ನಿರ್ದೇಶಕಿ ಸಹನಾ ವಂದಿಸಿದರು.

ನಂತರ ಮಕ್ಕಳಿಂದ ವಿವಿಧ ನೃತ್ಯ, ಗೀತ ಗಾಯನ ಕಾರ್ಯಕ್ರಮಗಳು ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.