ADVERTISEMENT

ಮನೆ ಮನದಲ್ಲಿ ಜೋಕುಮಾರನ ವರ್ಣನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 9:34 IST
Last Updated 18 ಸೆಪ್ಟೆಂಬರ್ 2013, 9:34 IST

ಸಿರುಗುಪ್ಪ: ಬಿತ್ತಿದ ಪೈರು ಬತ್ತಿ ಹೋಗುತಾವ ಅಣ್ಣಯ್ಯ ಮಳೆಯಾ ಕರುಣಿಸು ಬಡವರ ಬತ್ತಾಕ ಬಾಯಿ ಬಿಡುವರು ಅಣ್ಣಯ್ಯ ಮಳೆ ಕರುಣಿಸು ಜಾನಪದ ಸೊಗಡಿನ ಜೋಕುಮಾರಸ್ವಾಮಿ ತಾಯಂದಿರ  ಕಂಠ ಸಿರಿಯಲ್ಲಿ ಮೊಳಗಿತು.

ತಾಲ್ಲೂಕಿನ ಬಾಗವಾಡಿ ಗ್ರಾಮದ ಬಾರಕೇರ ಮನೆತನದ ಆರು ಜನ ಹೆಣ್ಣು ಮಕ್ಕಳು ಜೋಕುಮಾರಸ್ವಾಮಿಯನು್ನ ಹೊತ್ತುಕೊಂಡು ಮಂಗಳವಾರ ಗ್ರಾಮದ ಮನೆ ಮನೆಗಳಿಗೆ ತೆರಳಿ ಜೋಕುಮಾರನ ಹುಟ್ಟು, ಬೆಳವಣಿಗೆ ಶೌರ್ಯಗಳ ಬಗ್ಗೆ ಜಾನಪದ ಶೈಲಿಯಲ್ಲಿ ಹಾಡುತ್ತಾ ರೈತರಿಂದ ಕಾಳುಕಡಿ ಸಂಗ್ರಹಿಸಿ ಮಳೆ ಬೆಳೆ ಸಮೃದ್ಧಿಯಾಗಲಿ ಎಂದು ಹರಸುತ್ತಿದ್ದರು.

ಗ್ರಾಮದ ಬಾರಕೇರು ಮನೆತನದ ಹಿರಿಯ ತಲೆಗಳಾದ ನಡುಮನಿ ಗಂಗಮ್ಮ, ಯಂಕಮ್ಮ, ಶರಣಮ್ಮ, ತಾಯಮ್ಮ, ಗೀತಮ್ಮ, ಶೇಕಾಂಬಿಯವರ ತಂಡದವರು ಜೋಕುಮಾರ ಹುಣ್ಣಮೆಯ 7 ದಿನದ ಮೊದಲಿನಿಂದಲೇ ಕುಂಬಾರ ಮನೆಯಲ್ಲಿ ಹುತ್ತಿನ ಮಣ್ಣಿನಿಂದ ಅಗಲವಾದ ಬಾಯಿ, ಉರಿಮೀಸೆ, ತಲೆಗೆ ಕಿರೀಟದಂತೆ ಮುಂಡಾಸವಿರುವ ಜೋಕುಮಾರಸ್ವಾಮಿಯ ಮೂರ್ತಿಯನ್ನು ತಯಾರಿಸಿ ನಂತರ ಆ ಮೂರ್ತಿಯನ್ನು ಬುಟ್ಟಿಯಲಿ ಇಟ್ಟುಕೊಂಡು ಅದರ ಸುತ್ತ ಬೇವಿನ ಸೊಪ್ಪನ್ನು ತುಂಬಿಕೊಂಡು ‘ಯಾಕೋ ಕೋಮಲರಾಯ ನಿನ್ನ ಬಾಯಿಗೆ ಬೆಣ್ಣಿಲ್ಲಾ’ ಎಂದು ರಾಗ ಬದ್ಧವಾಗಿ ಹಾಡುತ್ತಾ ರೈತರಿಂದ ಬೆಣ್ಣೆ-ಎಣ್ಣೆ ಸಂಗ್ರಹಿಸಿ ಮೂರ್ತಿಗೆ ಹಚು್ಚತಾ್ತರೆ.

ರಾಯರು ರಾಯರೆಲ್ಲಾ ಚಾವಡಿಗಾ ಕುಳಿತುಕೊಂಡು..... ನನ ಮಗನಾ
ಕರಿಸ್ಯಾರ..... ಕರಸುತ್ತಾ ಕೇಳ್ಯಾರ ಉತ್ತರಾ ಮಳೆಯಾ ತರಿಸಯ್ಯಾ.. ಎಂದು ಜೋಕುಮಾರನ ಹೊತ್ತ  ಇಳಿ ವಯಸ್ಸಿನ ನಡುಮನಿ ಗಂಗಮ್ಮ ಜೋಕುಮಾರಸ್ವಾಮಿಯ ವರ್ಣನೆ ಪವಾಡಗಳನ್ನು  ವಿವರಿಸಿದರು.

‘ಅನಂತನಹುಣ್ಣಿಮೆಯ ದಿನ ಜೋಕುಮಾರಸ್ವಾಮಿಯನ್ನು ನದಿಯಲ್ಲಿ ವಿಸರ್ಜಿಸುತ್ತೇವೆ, ಜೋಳದ ಕಿಚಡಿ
ಮಾಡಿ ನೈವೇದ್ಯ ಅರ್ಪಿಸಿ ತಂಡದವರೆಲ್ಲಾ ಊಟ ಮಾಡುತ್ತೇವೆ’ ಎಂದು ಯಂಕಮ್ಮ
ಹೇಳಿದರು.

‘ನಾನು ಕಳೆದ 60 ವರ್ಷಗಳಿಂದ ಈ ಜೋಕುಮಾರಸ್ವಾಮಿಯ ತಾಯಿಯಾಗಿ ಆತನ ಹಾಡುಗಳನ್ನು ಹಾಡುತ್ತಾ ಬಂದಿದ್ದೇನೆ, ಗ್ರಾಮದ ಆರು ಕುಟುಂಬಗಳು ಈ ಸಂಪ್ರದಾಯವನು್ನ ಮುಂದುವರೆಸಿಕೊಂಡು ಬಂದಿದ್ದೇವೆ’ ಎಂದು ಅಜಿ್ಜ ಗಂಗಮ್ಮ ತಮ್ಮ ಪರಂಪರೆಯನು್ನ ಬಿಚ್ಚಿಟ್ಟಳು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.