ಸಿರುಗುಪ್ಪ: ವರುಣನ ಕೃಪೆಗಾಗಿ ತಾಲ್ಲೂಕಿನ ರೈತರು ಶುಕ್ರವಾರ ಸಾಮೂಹಿಕವಾಗಿ ಭಜನೆ ನಡೆಸುವ ಮೂಲಕ ಈಶ್ವರ ದೇವರ ಮೊರೆ ಹೋಗಿದ್ದಾರೆ.
ತಾಲ್ಲೂಕಿನ ಭೈರಾಪುರ ಗ್ರಾಮದಲ್ಲಿ ಈಶ್ವರ ದೇವಸ್ಥಾನದ ಆವರಣಲ್ಲಿ ದೇವರನ್ನು ಪೂಜಿಸುತ್ತಾ ಕಳೆದ 5 ದಿನಗಳಿಂದ ನಾಲ್ಕು ಗ್ರಾಮಗಳ ರೈತರು ಸರದಿಯ ಮೇಲೆ ಅಖಂಡ ಭಜನೆ ನಡೆಸಿ, ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ. ನಿತ್ಯ ದೇವರಿಗೆ ವಿಶೇಷ ಪೂಜೆ, ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುತ್ತಿದ್ದಾರೆ.
ಈಶ್ವರ ದೇವರ ಭಾವಚಿತ್ರ ಮತ್ತು ಈಶ್ವರ ಲಿಂಗ ಇಟ್ಟುಕೊಂಡು ಭಜನೆ ಮಾಡಲಾಗುತ್ತಿದ್ದು, ತಾಳ, ಮದ್ಲಿ, ಹಾರ್ಮೋನಿಯಂ ಮುಂತಾದವು ಗಳನ್ನು ಬಳಸುತ್ತಿದ್ದಾರೆ. ಮಡಿಸ್ನಾನ ಮಾಡಿದ ರೈತರು ಓಂ ನಮಃ ಶಿವಾಯ....~ ಎಂದು ನಿರಂತರ ಭಜನೆಯಲ್ಲಿ ತೊಡಗಿದ್ದಾರೆ.
ಜುಲೈ ಮೊದಲ ವಾರ ಕಳೆದರೂ ತಾಲ್ಲೂಕಿನಾದ್ಯಂತ ಮಳೆರಾಯನ ಸುಳಿವಿಲ್ಲದ್ದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಮತ್ತೊಮ್ಮೆ ಬರ ಎದುರಿಸುವ ಭೀತಿಯಿಂದ ಮಳೆಗಾಗಿ ಹಗಲಿರುಳು ಭಜನೆ ಮಾಡುತ್ತಿದ್ದಾರೆ. 7 ದಿನಗಳ ಕಾಲ ಭಜನೆ (ಸಪ್ತಭಜನೆ) ನಡೆಸುವ ಮೂಲಕ ದೇವಲ್ಲಿ ಮಳೆಗಾಗಿ ಬೇಡಿಕೊಳ್ಳುತ್ತಿದ್ದಾರೆ.
ಭೈರಾಪುರ, ಶಾನವಾಸಪುರ, ಕೊಂಚಗೇರಿ, ದರೂರು, ದಾಸಾಪುರ ಸೇರಿದಂತೆ 20 ಗ್ರಾಮಗಳ ರೈತರು ಅಖಂಡ ಸಪ್ತಭಜನೆಯಲ್ಲಿ ಪಾಲ್ಗೊಂ ಡಿದ್ದಾರೆ ಎಂದು ಕಾಲಭೈರವೇಶ್ವರ ಭಜನಾ ಮಂಡಳಿಯವರು ತಿಳಿಸಿದ್ದಾರೆ.
ಗ್ರಾಮದ ಮುಖಂಡರಾದ ಜಿ. ಶಾಂತನಗೌಡ, ಎಚ್. ನಾಗರಾಜ ಗೌಡ, ಟಿ.ರುದ್ರಗೌಡ, ಜೆ.ರುದ್ರಗೌಡ ಭಜನಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದಾರೆ.
ಭಾನುವಾರ ಸಪ್ತಭಜನೆ ಮುಗಿಯ ಲಿದ್ದು ಅಂದು ಅನ್ನ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಘಟಕ ಜೆ.ಸಿ.ಬಿ. ವಿರೂಪಾಕ್ಷ ಗೌಡ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.