ಸಂಡೂರು: ತಾಲ್ಲೂಕಿನ ವಿವಿಧೆಡೆ ಸೋಮವಾರ ಬೀಸಿದ ಗಾಳಿ ಮಳೆಗೆ ಕಮ್ಮತ್ತೂರು ಗ್ರಾಮದಲ್ಲಿ ಹಲವು ಮನೆಗಳ ಮೇಲಿನ ಸಿಮೆಂಟ್ ಶೀಟುಗಳಿಗೆ ಹಾನಿಯಾಗಿದ್ದರೆ, ಯಶವಂತನಗರದಲ್ಲಿ ಬಾಳೆ ಬೆಳೆಗೆ ಹಾನಿಯಾಗಿದೆ.
ಕಮ್ಮತ್ತೂರು ಗ್ರಾಮದಲ್ಲಿ ಶಿವಾಜಿರಾವ್, ದುರುಗಪ್ಪ, ಲಕ್ಷ್ಮಣ, ಮಂಜುನಾಥ, ನಾಗರಾಜ, ಹೂಲೆಪ್ಪ, ಕೃಷ್ಣಪ್ಪ, ಹನುಮಂತಪ್ಪ, ಭೀಮಕ್ಕನವರ ಮನೆಗಳು ಸೇರಿ ಒಟ್ಟು 13 ಮನೆಗಳ ಶೀಟುಗಳಿಗೆ ಹಾನಿಯಾಗಿದೆ.
ಕಾರ್ತಿಕ್ ಹಾಗೂ ತಿಮ್ಮಪ್ಪ ಎನ್ನುವವರ ಮನೆ ಮೇಲೆ ಮರಬಿದ್ದು, ಮನೆಗೆ ಹಾನಿಯಾಗಿದೆ. ಯಶವಂತನಗರ ಗ್ರಾಮದಲ್ಲಿ ಗಾಳಿಯಿಂದಾಗಿ ಪಕ್ಕದ ಗುಡ್ಡದಲ್ಲಿ ಗಣಿ ದೂಳು ಮೇಲೆದ್ದು, ಸುತ್ತಲೂ ವ್ಯಾಪಿಸಿತ್ತು. ಗ್ರಾಮದ ಕುಮಾರಸ್ವಾಮಿ, ಕಾಡು ಕರಿಂ, ಮಲ್ಲೇಶಪ್ಪ ಹಾಗೂ ಈರಣ್ಣ ಎಂಬ ರೈತರ ತೋಟಗಳಲ್ಲಿ 50–100 ಬಾಳೆ ಗಿಡಗಳು ನೆಲಕ್ಕೊರಗಿವೆ.
ಕುಮಾರಸ್ವಾಮಿಯವರ ಮಾವಿನ ತೋಟದಲ್ಲಿನ ಮಾವಿನ ಕಾಯಿಗಳು ಉದುರಿರುವುದಾಗಿ ಸಹಾಯಕ ತೋಟಗಾರಿಕೆ ಅಧಿಕಾರಿ ಸುನಿಲ್ ತಿಳಿಸಿದರು. ತಾಲ್ಲೂಕಿನ ಗೆಣತಿಕಟ್ಟೆ ಗ್ರಾಮದ ನಿವಾಸಿಗಳಾದ ಹೇಮಣ್ಣ ಹಾಗೂ ಅವರ ಪುತ್ರ ಸಂಜಯ್ ತಮ್ಮ ಮನೆಯ ಕಿಟಕಿಯ ಮೂಲಕ ಮಳೆಯನ್ನು ವೀಕ್ಷಿಸುತ್ತಿದ್ದಾಗ ಸಿಡಿದ ಸಿಡಿಲಿಗೆ ಆಘಾತಗೊಂಡು ಅಸ್ವಸ್ಥರಾಗಿದ್ದರು.
ಅವರಿಗೆ ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ತಂದೆ ಮಗಿ ಇಬ್ಬರು ಚೇತರಿಸಿಕೊಂಡಿದ್ದಾರೆ.
ತಾಲ್ಲೂಕಿನ ಕುರೆಕುಪ್ಪ ಮಳೆ ಮಾಪನ ಕೇಂದ್ರದಲ್ಲಿ ಮಂಗಳವಾರ 11.3 ಮಿ.ಮೀ ಮಳೆ ದಾಖಲಾಗಿದ್ದರೆ, ಚೋರನೂರು ಮಳೆ ಮಾಪನ ಕೇಂದ್ರದಲ್ಲಿ 6.4 ಮಿ.ಮೀ ಮಳೆ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.