ADVERTISEMENT

ರಕ್ತದಾನದಿಂದ ರೋಗಮುಕ್ತ ಆರೋಗ್ಯ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 5:00 IST
Last Updated 25 ಜನವರಿ 2012, 5:00 IST

ಕುರುಗೋಡು: ಆರೋಗ್ಯವಂತ ವ್ಯಕ್ತಿ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ರಕ್ತದಾನ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ಮುಕ್ತರಾಗ ಬಹುದು ಎಂದು ವೈದ್ಯಾಧಿಕಾರಿ ಡಾ.ರಾಘವೇಂದ್ರ ಹೇಳಿದರು.

ಇಲ್ಲಿಗೆ ಸಮೀಪದ ಕೋಳೂರು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ರಾಜರಾಜೇಶ್ವರಿ ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಕ್ತದಾನ ಮಾಡಿ ಸಂಕಷ್ಟದಲ್ಲಿರುವವರ ಜೀವವನ್ನು ರಕ್ಷಿಸುವಂತೆ ಸಲಹೆ ಮಾಡಿದರು.   

ಆರೋಗ್ಯ ಸಹಾಯಕ ಎಸ್. ರಾಘವ ಶೆಟ್ಟಿ ಮಾತನಾಡಿದರು. ರಾಜರಾಜೇಶ್ವರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಜಿ.ರಮೇಶ್ ಉದ್ಘಾಟಿಸಿದರು.

ಗ್ರಾಮದ ಯುವಕರು, ಸಂಘಸಂಸ್ಥೆ ಸದಸ್ಯರು, ಕಾಲೇಜು ವಿದ್ಯಾರ್ಥಿಗಳು ಒಟ್ಟು 55 ಜನರು ಶಿಬಿರದಲ್ಲಿ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿದರು.

ಎಂ.ಡಿ. ಮಹ್ಮದ್ ಖಾಸೀಂ ನಿರೂಪಿಸಿದರು. ಟಿ.ಎಂ. ಮೃತ್ಯುಂಜಯ ಸ್ವಾಮಿ ಸ್ವಾಗತಿಸಿದರು. ಕುಮಾರಗೌಡ ವಂದಿಸಿದರು.

ಮಧ್ವನವಮಿ ಇಂದಿನಿಂದ
ಹೊಸಪೇಟೆ: ಸ್ಥಳೀಯ ಶ್ರೀ ವಿಠಲಕೃಷ್ಣ ಟ್ರಸ್ಟ್  ಇದೇ 25 ರಿಂದ ಮಧ್ವನವಮಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ವಡಕರಾಯಸ್ವಾಮಿ ದೇವಸ್ಥಾನ ದಲ್ಲಿ ಇದೇ 31ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರತಿನಿತ್ಯವೂ ವಾಯು ಸ್ತುತಿ ಪುನಶ್ಚರಣ ಅಭಿಷೇಕ, ಪೂಜೆ ಉಪನ್ಯಾಸ, ಸ್ವಸ್ತಿವಾಚನ, ಪಲ್ಲಕ್ಕಿ ಉತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ವೆಂಕಟೇಶಾಚಾರ್ ಅವರಿಂದ  ಶ್ರೀ ಮದ್ಭಾಗವತ ಪ್ರವಚನ ನಡೆಯಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷರು ಮತ್ತು ಸದಸ್ಯರು ತಿಳಿಸಿದ್ದಾರೆ.

ಪುಣ್ಯಾರಾಧನೆ ಇಂದಿನಿಂದ
ಹೊಸಪೇಟೆ:
ಬ್ರಹ್ಮಶ್ರೀ ಸಂಹಾದ್ರಿ ಸದ್ಗುರು ಸ್ವಾಮಿಗಳ 10ನೇ ಪುಣ್ಯಾರಾಧನೆಯನ್ನು ಸ್ಥಳೀಯ ಚಪ್ಪರದಹಳ್ಳಿ ಅಂಬಾಭವಾನಿ ದೇವಸ್ಥಾನದಲ್ಲಿ ಇದೇ 25ರಿಂದ ಹಮ್ಮಿಕೊಳ್ಳಲಾಗಿದೆ.

25ರಿಂದ 28 ರವರೆಗೆ ನಡೆಯುವ ಕಾರ್ಯಕ್ರಮಕ್ಕೆ 25 ರಂದು ರಂದು ಬೆಳಿಗ್ಗೆ 7-30ಕ್ಕೆ ಓಂಕಾರ ಪೀಠದ ಪೂಜ್ಯ ಸದ್ಗುರುಮೂರ್ತಿ ಸ್ವಾಮಿಗಳ ಪುಣ್ಯಾರಾಧನೆಗೆ ಚಾಲನೆ ನೀಡುವರು.

ಸದ್ಗುರುಗಳ ವಿಚಾರಧಾರೆಯ ಆಧ್ಯಾತ್ಮ ವಿಚಾರ ಗೋಷ್ಠಿಗಳ ನಡೆಯಲಿದೆ ಎಂದು ನರಹರಿ ಆಶ್ರಮದ ಕಾರ್ಯಕಾರಿ ಮಂಡಳಿ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.