ಹೊಸಪೇಟೆ: ಶ್ರಾವಣದ ಆರಂಭ ಆಗುತ್ತಿದ್ದಂತೆಯೆ ಹಬ್ಬಗಳ ಸರದಿಯೂ ಆರಂಭ. ನಾಲ್ಕನೇ ದಿನಕ್ಕೆ ಬರುವ ನಾಗರ ಚೌತಿ ಮಹಿಳೆಯರಲ್ಲಿ ವಿಶೇಷ ಸಂಭ್ರಮಕ್ಕೆ ಕಾರಣವಾಗಿತ್ತು.
ಶುದ್ದ ಸ್ನಾನವ ಮಾಡಿ, ಚಿತ್ತಾಕರ್ಷಕ ವಸ್ತ್ರಗಳೊಂದಿಗೆ ಮಹಿಳೆಯರು ದೊಡ್ಡ ತಟ್ಟೆಗಳಲ್ಲಿ ವಿವಿಧ ಉಂಡೆಗಳೊಂದಿಗೆ ಹಾಲನ್ನು ಹಿಡಿದು ನಾಗದೇವಾಲಯ ಮತ್ತು ಹುತ್ತಗಳತ್ತ ಸಾಗಿಬರುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು.
ಸಣ್ಣ ಸಣ್ಣ ಪುಟಾಣಿಗಳು ಸಹ ತಂದೆ, ಅಜ್ಜ, ಅಜ್ಜಿ ಹೀಗೆ ಎಲ್ಲರ ಹೆಸರು ಹೇಳುತ್ತ ನಾಗದೇವರಿಗೆ ಹಾಲು ಅರ್ಪಿಸುತ್ತಿದ್ದುದು ಸಾಮಾನ್ಯವಾಗಿತ್ತು.
ನಗರದ ರಾಣಿಪೇಟೆಯ ನಾಗರಕಟ್ಟೆ ಯಲ್ಲಿ ಹಾವಾಡಿಗನೊಬ್ಬ ನಿಜವಾದ ನಾಗವನ್ನು ಕಟ್ಟೆಗೆ ತರುವ ಮೂಲಕ ದಕ್ಷಿಣೆ ಮತ್ತು ಹಾಲು ಪಡೆಯುತ್ತಿದ್ದರೆ ಏನೂ ಅರಿಯದ ಕಂದಮ್ಮಗಳು ಅವುಗಳತ್ತ ನಿರ್ಭಯದಿಂದ ಸಾಗುತ್ತಿರು ವುದು ಕಂಡು ಬಂತು.
ಉಳಿದಂತೆ ನಾಗರಕಟ್ಟೆ, ಬುಕ್ಕ ಸಾಗರ ಮತ್ತು ಹೊಸೂರುಗಳಲ್ಲಿಯೂ ವಿಶೇಷ ನಾಗದೇವಾಲಯಗಳಲ್ಲಿ ಮಹಿಳೆಯರು ಸರದಿಯಲ್ಲಿ ನಿಂತು ನಾಗ ದೇವರಿಗೆ ಹಾಲೆರೆಯುವುದು ಸಾಮಾನ್ಯವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.