ADVERTISEMENT

`ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ತಡೆ'

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 8:57 IST
Last Updated 27 ಡಿಸೆಂಬರ್ 2012, 8:57 IST

ಕೂಡಿಗ್ಲಿ: ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಮದುವೆಯಾಗುವುದರಿಂದ ದುಂದುವೆಚ್ಚವನ್ನು ತಡೆಗಟ್ಟಬಹುದು ಎಂದು ಸಂಡೂರು ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕಿ ಡಾ. ಮಲ್ಲಿಕಾ ಘಂಟಿ ಅಭಿಪ್ರಾಯಪಟ್ಟರು.

ಅವರು ಬುಧವಾರ ಪಟ್ಟಣದ ಮಹದೇವ ಮೈಲಾರ ಕ್ರೀಡಾಂಗಣದಲ್ಲಿ ನಾಗೇಂದ್ರ ಸೇವಾ ಬಳಗ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನಿಸುವ ಮಕ್ಕಳಿಗೆ ಐತಿಹಾಸಿಕ ಪುರುಷರ, ಮಹಿಳೆಯರ ಹೆಸರಗಳನ್ನು ನಾಮಕರಣ ಮಾಡಿ, ಜೊತೆಯಲ್ಲಿ ಅವರ ಆದರ್ಶಗಳನ್ನೂ ಪಾಲಿಸಿ ಎಂದು ಹೇಳಿದರು. ಪ್ರತಿಯೊಬ್ಬ ಯುವಕನೂ ಸಮಾಜದ ಪರಿವರ್ತನೆಗೆ ಶ್ರಮಿಸಬೇಕು. ಕನ್ನಡದ ಮಂತ್ರಗಳನ್ನು ಹಾಗೂ ವಚನಗಳನ್ನು ಹೇಳುವುದರ ಮೂಲಕ ಜನಸಾಮಾನ್ಯರನ್ನು ತಲುಪಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ. ನಾಗೇಂದ್ರ, ಇಂತಹ ಸಾಮೂಹಿಕ ವಿವಾಹಗಳ ಮುಖಾಂತರ ಸಾಕಷ್ಟು ಹಣ ಉಳಿಸಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ 33 ಜೋಡಿಗಳು ವಿವಾಹವಾಗುವ ಮೂಲಕ ಹೊಸಬಾಳಿಗೆ ಕಾಲಿರಿಸಿದರು.

ವೇದಿಕೆಯಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ಕೊಟ್ಟೂರು ಚಾನುಕೋಟಿ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಕಾನಾಮಡುಗು ದಾಸೋಹ ಮಠದ ಶರಣಾರ್ಯರು, ಭೋವಿ ಗುರುಪೀಠದ ಇಮ್ಮುಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಮಾಚಿದೇವ ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ, ಸರ್ದಾರ ಸೇವಾಲಾಲ್ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಜಿ.ಪಂ ಸದಸ್ಯೆ ಮೀನಾಕ್ಷಮ್ಮ, ತಾ.ಪಂ. ಅಧ್ಯಕ್ಷೆ ಪ್ರಮೀಳಾ ಚಿದಾನಂದಗೌಡ, ಬಂಗಾರು ಸೋಮಣ್ಣ, ಕೆ.ಎಂ. ತಿಪ್ಪೇಸ್ವಾಮಿ, ಎಂ.ಎಂ. ಜೆ.ಸ್ವರೂಪನಾಂದ, ರಂಗಕಲಾವಿದೆ ಮರಿಯಮ್ಮನಹಳ್ಳಿ ನಾಗರತ್ನಮ್ಮ, ಎಪಿಎಂಸಿ ಅಧ್ಯಕ್ಷ ಎಚ್. ರೇವಣ್ಣ, ಡಾ. ಅಂಬಣ್ಣ, ಜಿ. ಉಮೇಶ್, ಘನಿಸಾಬ್, ಸೂಲದಹಳ್ಳಿ ಸಿದ್ದಪ್ಪ, ಪ.ಪಂ. ಸದಸ್ಯ ಅಂಜಿನಪ್ಪ, ಕನ್ನಿಕೆರೆ ನಾಗರಾಜ್, ಬೊಮ್ಮಘಟ್ಟ ಪಂಪಾಪತಿ, ಪುಟ್ಟರಾಜ್ ಗವಾಯಿಗಳ ಶಿಷ್ಯ ಚನ್ನಪ್ಪರಾಜ್, ಜಿ.ಪಂ ಸದಸ್ಯ ಹುಲಗಪ್ಪ, ತಹಶೀಲ್ದಾರ್ ಜವರೇಗೌಡ, ಕೆ. ಎಚ್. ವೀರನಗೌಡ, ಸೇವಾ ಬಳಗದ ವಿ. ಪ್ರಕಾಶ, ಜುಬೇರ, ಶಿವಶಂಕರ, ಸಿ.ಬಿ. ಗುರುರಾಜ, ರಘು ಕಲಾಲ, ಅನಿಲಮಂಜು, ಗುಳಿಗಿ ಗುರು, ಕೊಂಡಯ್ಯರ ರಘು, ಟಿ.ಕೃಷ್ಣ, ಶರತಕುಮಾರ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಸಿದ್ದರು.

ಎಸ್‌ಎವಿಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಪೂಜಾ ಪ್ರಾರ್ಥಿಸಿದರು. ನಾಗೇಂದ್ರ ಸೇವಾ ಬಳಗದ ಅಧ್ಯಕ್ಷ ಬಂಗಾರು ಹನುಮಂತು ಸ್ವಾಗತಿಸಿದರು.  ಉಪನ್ಯಾಸಕ ಗೋವಿಂದಪ್ಪ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.