ಹಂಪಿ (ಹೊಸಪೇಟೆ): ಐತಿಹಾಸಿಕ ಹಂಪಿ ಕ್ಷೇತ್ರವು ಪರಂಪರೆಯ ಪಟ್ಟಿಗೆ ಸೇರಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದಂತೆ ನಿವಾಸಿಗಳ ತೆರವಿಗೆ ಗಡುವು ಸಮೀಪಿಸುತ್ತಿದ್ದಂತೆಯೇ ಸ್ಥಳೀಯ ನಿವಾಸಿಗಳು ತಮ್ಮ ದಶಕಗಳ ಸಂಬಂಧವನ್ನು ಕಳಚಿಕೊಂಡು ಸ್ವಯಂ ತೆರವಿಗೆ ಮುಂದಾಗಿದ್ದಾರೆ.
ನ್ಯಾಯಾಲಯದ ಆದೇಶದಂತೆ ಕಡ್ಡಾಯವಾಗಿ ಮನೆ, ಅಂಗಡಿ ಮುಂಗಟ್ಟುಗಳನ್ನು ಖಾಲಿ ಮಾಡಲೇಬೇಕಾಗಿದೆ. 15 ದಿನಗಳ ಗಡುವು ನೀಡಿ ಭಾರತೀಯ ಪುರಾತತ್ವ ಇಲಾಖೆ ನೋಟಿಸ್ ಜಾರಿ ಮಾಡಿತ್ತು. ಇನ್ನೊಂದೆಡೆ ಕಡ್ಡಿರಾಮಪುರದ ಬಳಿ ಇಲಾಖೆ ನಿಗದಿಪಡಿಸಿ ಹಂಚಿಕೆ ಮಾಡಿಕೊಟ್ಟಿರುವ ನಿವೇಶನದ ಹಕ್ಕು ಪತ್ರ ಪಡೆದುಕೊಳ್ಳಿ ಎಂದು ಹಂಪಿ ಪ್ರದೇಶ ನಿರ್ವಹಣಾ ಪ್ರಾಧಿಕಾರವೂ ಸೂಚನೆ ನೀಡಿದೆ. ಇದೇ 29ರ ಒಳಗಾಗಿ ತಮ್ಮ ಅನುಕೂಲ ಸ್ಥಳಗಳಿಗೆ ತೆರಳಲು ನಿವಾಸಿಗಳು ಮುಂದಾಗಿದ್ದಾರೆ.
`ಚಿಕ್ಕ ವಯಸ್ಸಿನಲ್ಲಿಯೇ ಹಂಪಿಗೆ ಬಂದು ಬದುಕು ಕಟ್ಟಿಕೊಂಡಿರುವ ನಮಗೆ ದಿಕ್ಕು ತೋಚದಂತಾಗಿದೆ. ಜೀವನದ ಕೊನೆಯ ದಿನಗಳಲ್ಲಿ ವಿರೂಪಾಕ್ಷೇಶ್ವರ ಆಶೀರ್ವಾದವಿಲ್ಲದ ಸ್ಥಳಕ್ಕೆ ಹೋಗಬೇಕಾಗಿದೆ~ ಎನ್ನುತ್ತಾರೆ ಗ್ರಾಮದ ಹಿರಿಯ ಶಿವಪ್ಪ ಗುತ್ತಲ.
ಈ ನಡುವೆ ಒಟ್ಟು 328 ನಿವಾಸಿಗಳು ಹಾಗೂ ವಾಣಿಜ್ಯ ಮಳಿಗೆಗಳ ತೆರವು ಕಾರ್ಯಚರಣೆ ಬಿರುಸಿನಿಂದ ಸಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.