ಹೂವಿನಹಡಗಲಿ: ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ತಾ.ಪಂ. ನೂತನ ಅಧ್ಯಕ್ಷರಾಗಿ ಹುಲುಗಪ್ಪ ಆಯ್ಕೆಯಾಗಿದ್ದಾರೆ.
ಸಹಾಯಕ ಆಯುಕ್ತ ಅಶೋಕ್ ನೇತೃತ್ವದಲ್ಲಿ ಗುರುವಾರ ಮಧ್ಯಾಹ್ನ 12.30ಕ್ಕೆ ಚುನಾವಣಾ ಪ್ರಕ್ರಿಯೆ ನಡೆಯಿತು. ಕವಿತಾ ಹೂಗಾರ ಮತ್ತು ಹುಲುಗಪ್ಪ ಅವರಿಂದ ನಾಮಪತ್ರಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಚುನಾವಣೆ ನಡೆಯಿತು. ಹುಲುಗಪ್ಪ 12ಮತ ಪಡೆದರೆ, ಕವಿತಾ ಹೂಗಾರ 2 ಮತ ಗಳಿಸಿದರು.
ತಾ.ಪಂ. ಅಧ್ಯಕ್ಷರ ಆಯ್ಕೆ ಕಳೆದ 26ರಂದು ನಡೆಯಬೇಕಿತ್ತು. ನಾಮಪತ್ರ ಸಲ್ಲಿಕೆಯ ಗೊಂದಲದಿಂದ ಅಧ್ಯಕ್ಷರ ಚುನವಣೆಯನ್ನು ಮಾರ್ಚ್ 29ಕ್ಕೆ ಮೂಂದೂಡಲಾಗಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್ ನಡುವಣ ಪ್ರತಿಷ್ಠೆಯ ಕಣವಾಗಿದ್ದ ಈ ಹುದ್ದೆಯನ್ನೇರಲು ನಡೆದ ಕಸರತ್ತುಗಳು, ಅದಕ್ಕೆ ತೆರೆಮರೆಯಲ್ಲಿ ನಡೆದ ಪ್ರಕ್ರಿಯೆಗಳ ಕಾರಣ 29ರಂದು ಮತ್ತೆಚುನಾವಣೆ ಮುಂದೂಡಲ್ಪಟ್ಟಿತು.
ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ತಾ.ಪಂ.ಸದಸ್ಯರ ಬೆಂಬಲದೊಂದಿಗೆ ಹುಲುಗಪ್ಪ ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾದರು.
ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತ ಅಶೋಕ್, ಪ್ರಭಾರಿ ತಹಶೀಲ್ದಾರ್ ವೀರಮಲ್ಲಪ್ಪ ಪೂಜಾರ್, ತಾ.ಪಂ.ಉಪಾಧ್ಯಕ್ಷರಾದ ಉಪಾಧ್ಯಕ್ಷೆ ಸಾವಿತ್ರಮ್ಮ ಮಂಜುನಾಥ. ಸ್ಥಾಯಿ ಸಮಿತಿ ಅಧ್ಯಕ್ಷ ಐಗೋಳ್ ಚಿದಾನಂದ, ತಾ.ಪಂ.ಸದಸ್ಯರು ಹಾಗೂ ಮುಖಂಡರು, ಅಭಿಮಾನಿಗಳು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.
ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಕಾರ್ಯಕರ್ತರು ಅಧ್ಯಕ್ಷರ ಆಯ್ಕೆಯನ್ನು ಘೋಷಿಸುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಮಧ್ಯಾಹ್ನದವರೆಗೂ ವಾತಾವರಣ ಬಿಗುವಿನಿಂದ ಕೂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.