
ಹೊಸಪೇಟೆ: ‘ಗ್ರಾಮೀಣ ಪ್ರತಿಭಾವಂತ ಮಕ್ಕಳು ಸರ್ಕಾರಿ ಶಾಲೆಗಳಲ್ಲಿದ್ದು, ಅಂಥವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಡೆಯಬೇಕು’ ಎಂದು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಡಿ.ರಂಗಾರೆಡ್ಡಿ ಹೇಳಿದರು.
ಇಲ್ಲಿನ ಟಿ.ಬಿ.ಡ್ಯಾಂ. ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ ಹೆಚ್ಚಾಗಿದ್ದು, ಅವರಿಗೆ ಸೌಲಭ್ಯಗಳ ಕೊರತೆ ಹೆಚ್ಚಾಗಿದೆ. ಅವರಿಗೆ ಸೌಲಭ್ಯಗಳನ್ನು ಹೆಚ್ಚಿಸುವ ಮೂಲಕ ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ’ ಎಂದು ಹೇಳಿದರು.
ನಗರಸಭೆ ಮಾಜಿ ಸದಸ್ಯ ಟಿ.ವೆಂಕಟೇಶ ಮಾತನಾಡಿ, ‘ಹಿಂದೆ ಪುಸ್ತಕಗಳನ್ನು ಖರೀದಿಸಿ ಓದಬೇಕಾಗಿತ್ತು. ಆದರೆ ಇಂದು ಸರ್ಕಾರ ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣ. ಉಚಿತ ಪುಸ್ತಕ, ಉಚಿತ ಸೈಕಲ್, ವಿದ್ಯಾರ್ಥಿ ವೇತನ, ಉಚಿತ ಶೈಕ್ಷಣಿಕ ಪ್ರವಾಸ ಇಂತಹ ಹತ್ತಾರು ಉಚಿತ ಸೌಲಭ್ಯಗಳನ್ನು ಒದಗಿಸಿದೆ. ಇಂತಹ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು’ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪಿ.ಹನುಮಂತಪ್ಪ ಮಾತನಾಡಿ, ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡಬೇಕಾದದ್ದು ಸಮುದಾಯದ ಕರ್ತವ್ಯವಾಗಿದೆ ಎಂದರು.
ಟಿ.ಬಿ.ಬೋರ್ಡಿನ ಕಾರ್ಯದರ್ಶಿ ಡಿ.ರಂಗಾರೆಡ್ಡಿ, ದಾನಿಗಳಾದ ಮಾಜಿ ನಗರಸಭೆ ಸದಸ್ಯ ಟಿ.ವೆಂಕಟೇಶ್, ನಿವೃತ್ತ ಶಿಕ್ಷಕಿ ಚಂದ್ರಾ, ಗೌರವ ತಮಿಳು ಶಿಕ್ಷಕ ಗೋಪಿ ಅವರನ್ನು ಸನ್ಮಾನಿಸಲಾಯಿತು. ಉಪ ಪ್ರಾಚಾರ್ಯ ವಿಜಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಎಸ್ತರ್ ಪ್ರಿಯದರ್ಶಿನಿ, ನವೀನ್ ಕುಮಾರ್ ಅಳವಂಡಿ, ವಿಜಯಕುಮಾರ್, ಎಸ್.ಡಿ.ಎಂ.ಸಿ ಅಧ್ಯಕ್ಷ ಎಸ್.ಪಿ.ಕುಮಾರ್, ಸದಸ್ಯರಾದ ಪ್ರಸನ್ನ ವೆಂಕಟೇಶ ವರ್ಮಾ, ಆರ್.ವೆಂಕಟೇಶ್, ಪತ್ರಕರ್ತ ಶ್ರೀನಿವಾಸ ಉಪಸ್ಥಿತರಿದ್ದರು. ಡಿ.ದೇವದಾಸ್ ಸ್ವಾಗತಿಸಿದರು. ಶಿಕ್ಷಕ ಲೀಲಾಮೂರ್ತಿ ನಿರೂಪಿಸಿದರು. ಉಪನ್ಯಾಸಕ ಸಮದ್ ಕೊಟ್ಟೂರು ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.