
ಬಂಧನ (ಸಾಂದರ್ಭಿಕ ಚಿತ್ರ)
ಸಂಡೂರು (ಬಳ್ಳಾರಿ ಜಿಲ್ಲೆ): ತಾಲ್ಲೂಕಿನ ತೋರಣಗಲ್ಲು ಗ್ರಾಮದ ಜಿಂದಾಲ್ ಕಾರ್ಖಾನೆ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಆಂಧ್ರಪ್ರದೇಶ ಮೂಲದ ವ್ಯಕ್ತಿಗೆ ನಕಲಿ ಚಿನ್ನದ ಬಿಲ್ಲೆಗಳನ್ನು ನೀಡಿ ₹11.40 ಲಕ್ಷ ವಂಚಿಸಿದ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಗೊತ್ತಾಗಿದೆ.
ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಬಾಲಯಪಲ್ಲಿ ಗ್ರಾಮದ ಜಡಿಪಲ್ಲಿ ಚಲುಮಯ್ಯ ಅವರಿಗೆ ಅಪರಿಚಿತ ವ್ಯಕ್ತಿ ಮೊಬೈಲ್ ಕರೆ ಮಾಡಿ ನನ್ನ ಹೆಸರು ರಮೇಶ್, ನಾನು ನಿಮಗೆ ಬಾಲಯಪಲ್ಲಿ ಗ್ರಾಮದಲ್ಲಿ ಪರಿಚಯವಿದ್ದೇನೆ. ನಮ್ಮ ಜಮೀನಿನಲ್ಲಿ ಚಿನ್ನದ ಬಿಲ್ಲೆಗಳು ಸಿಕ್ಕಿದ್ದು, ಅದನ್ನು ಗೌಪ್ಯವಾಗಿ ಮಾರುತ್ತಿರುವೆ. ಬೇಕಿದ್ದರೆ, ಸ್ಯಾಂಪಲ್ ಒಯ್ಯಿರಿ. ಆಗ ಭೇಟಿಯಾದ ಚಲುವಯ್ಯ ಅವರಿಗೆ ಸ್ವಲ್ಪ ಪ್ರಮಾಣದಲ್ಲಿ ನಿಜವಾದ ಬಂಗಾರ ನೀಡಿದ್ದಾನೆ.
ಕೆಲವು ದಿನಗಳ ಬಳಿಕ ಚಲುವಯ್ಯ ಅವರಿಗೆ ಮತ್ತೆ ಕರೆ ಮಾಡಿದ ವ್ಯಕ್ತಿ, 250 ಗ್ರಾಂ. ಚಿನ್ನವನ್ನು ₹3 ಲಕ್ಷಕ್ಕೆ ನೀಡುತ್ತೇನೆ ಎಂದು ಹೇಳಿದ್ದಾನೆ. ಆಗ ತೋರಣಗಲ್ಲು ಗ್ರಾಮಕ್ಕೆ ಚಲುವಯ್ಯ ಭೇಟಿ ನೀಡಿ, ವ್ಯಕ್ತಿಗೆ ₹ 11.40 ಲಕ್ಷ ನೀಡಿ 1 ಕೆಜಿ ಚಿನ್ನ (ನಕಲಿ ಚಿನ್ನ) ಖರೀದಿಸಿ ಸ್ವಗ್ರಾಮಕ್ಕೆ ತೆರಳಿದ್ದಾರೆ. ಎರಡು ದಿನಗಳ ಬಳಿಕ ಚಿನ್ನವನ್ನು ಪರಿಶೀಲಿಸಿದಾಗ ನಕಲಿ ಎಂದು ಗೊತ್ತಾಗಿದೆ.
ಈ ಕುರಿತು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.