ಬಳ್ಳಾರಿ: ‘ಕೋಮುದ್ವೇಷದಿಂದ ದೇಶ ವಿನಾಶವಾಗುತ್ತದೆ. ಸೌಹಾರ್ದತೆ ಮಾತ್ರ ಶಾಂತಿಯುತ ಬಾಳ್ವೆಯನ್ನು ಸಮಾಜದಲ್ಲಿ ಮೂಡಿಸಲು ಸಾಧ್ಯ’ ಎಂದು ಚಿಂತಕ ಟಿ.ಜಿ.ವಿಠಲ್ ಪ್ರತಿಪಾದಿಸಿದರು.
ಜನಪರ ಸಂಘಟನೆಗಳು ರೂಪಿಸಿರುವ ‘ಸೌಹಾರ್ದತೆಗಾಗಿ ಕರ್ನಾಟಕ’ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಮಂಗಳವಾರ ಸಂಜೆ ಮಾನವ ಸರಪಳಿ ರಚಿಸಿದ ಸಂದರ್ಭದಲ್ಲಿ ಮಾತನಾಡಿದರು.
‘ಶಾಂತಿ ಸೌಹಾರ್ದತೆಗೆ ಹೆಸರಾಗಿರುವ ಕರ್ನಾಟಕದ ಅಸಹಿಷ್ಣುತೆ, ಹಿಂಸಾಚಾರದಿಂದ ನಲುಗುವಂತಾಗಿದೆ. ಸಂವಿಧಾನ, ಕಾನೂನಿನ ಆಡಳಿತವನ್ನು ಕೋಮುಹಿಂಸೆಯಂಥ ಕೃತ್ಯಗಳಿಂದ ದುರ್ಬಲಗೊಳಿಸುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದೆ’ ಎಂದರು.
ನಗರದ ಗಿಡಿಗಿ ಚೆನ್ನಪ್ಪ ವೃತ್ತದಿಂದ ಎಚ್.ಆರ್.ಗವಿಯಪ್ಪ ವೃತ್ತದವರೆಗೆ ಒಂದು ಕಿ.ಮೀ.ಗೂ ಹೆಚ್ಚು ದೂರ ಮಾನವ ಸರಪಳಿಯನ್ನು ರಚಿಸಲಾಗಿತ್ತು.
ಜೆ.ಸತ್ಯಬಾಬು, ಪ್ರೊ.ಶಾಂತನಾಯ್ಕ್, ಪಾಲಿಕೆ ಸದಸ್ಯರಾದ ಪರ್ವೀನ್, ಸುಧಾಕರ ದೇಸಾಯಿ, ಪರ್ವಿನ್, ಹನುಮ ಕಿಶೋರ್, ಕೆ.ಸೋಮಶೇಖರ್,
ಮಾಧವರೆಡ್ಡಿ, ಮಲ್ಲಿಕಾರ್ಜುನರೆಡ್ಡಿ, ಖಾಜಾ ಸಾಬ್, ಎಚ್.ಎಂ.ಕಿರಣ್, ಪಂಪಾಪತಿ, ಕಟ್ಟೆ ಬಸಪ್ಪ ಪಾಲ್ಗೊಂಡಿದ್ದರು.
ಸಿ.ಪಿ.ಐ.ಎಂ., ಸಿ.ಪಿ.ಐ., ಎಸ್.ಯು.ಸಿ.ಐ.ಸಿ., ಸಿ.ಐ.ಟಿ.ಯು., ರೈತ ಸಂಘ, ಯುವ ಕಾಂಗ್ರೆಸ್, ಜೆ.ಡಿ.ಎಸ್, ದಲಿತ ಪರ ಸಂಘಟನೆಗಳು, ಜನವಾದಿ ಮಹಿಳಾ ಸಂಘಟನೆ ಸದಸ್ಯರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.