ಹೊಸಪೇಟೆ: ರಾಜ್ಯದಲ್ಲಿ ಬೇರೂರಿರುವ ಡ್ರಗ್ಸ್ ಜಾಲ ಮಟ್ಟ ಹಾಕಲು ರಾಜ್ಯ ಸರ್ಕಾರ ಕಠಿಣ ಕಾನೂನು ಜಾರಿಗೆ ತರಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಆಗ್ರಹಿಸಿದೆ.
ಈ ಸಂಬಂಧ ಪರಿಷತ್ತಿನ ಕಾರ್ಯಕರ್ತರು ಸೋಮವಾರ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಎಚ್. ವಿಶ್ವನಾಥ್ ಅವರಿಗೆ ಸಲ್ಲಿಸಿ ಒತ್ತಾಯಿಸಿದರು.
ಮಾದಕ ವಸ್ತುಗಳ ಪಿಡುಗು ರಾಜ್ಯದಲ್ಲಿ ಹೆಚ್ಚಿರುವುದು ದುರದೃಷ್ಟಕರ. ಯುವ ಸಮೂಹವನ್ನು ಗುರಿಯಾಗಿರಿಸಿ ಈ ದಂಧೆಯನ್ನು ರಾಜ್ಯದಲ್ಲಿ ನಡೆಸಲಾಗುತ್ತಿದ್ದು, ಅನೇಕರು ಅದರ ವ್ಯಸನಿಗಳಾಗುತ್ತಿದ್ದಾರೆ. ಸಿನಿಮಾ ಜಗತ್ತಿನವರು ಇದಕ್ಕೆ ಹೊರತಾಗಿಲ್ಲ. ಈ ಕುರಿತು ಯುವ ಪೀಳಿಗೆಯಲ್ಲಿ ಅರಿವು ಮೂಡಿಸಲು ಪರಿಷತ್ತಿನಿಂದ ರಾಜ್ಯದಾದ್ಯಂತ ‘ಡ್ರಗ್ಸ್ ಮುಕ್ತ ಕರ್ನಾಟಕ’ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಯುವಸಮೂಹವನ್ನು ಡ್ರಗ್ಸ್ ವ್ಯಸನಕ್ಕೆ ದೂಡುವುದಲ್ಲದೇ ಭಯೋತ್ಪಾದಕರು ಅದರ ಮೂಲಕ ದೇಶವನ್ನು ಹಾಳು ಮಾಡುವ ಸಂಚು ರೂಪಿಸಿದ್ದಾರೆ. ಅದರಲ್ಲೂ ಪ್ರತಿಷ್ಠಿತ ಕಾಲೇಜುಗಳ ಕ್ಯಾಂಪಸ್ಗಳನ್ನು ಗುರಿ ಮಾಡಲಾಗುತ್ತಿದೆ. ಹಾಗಾಗಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಪ್ರತೀಕ ಮಾಳಿ ಹಾಗೂ ಕಾರ್ಯಕರ್ತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.