ಹೊಸಪೇಟೆ: ದಕ್ಷಿಣ ಕೊರಿಯಾದಲ್ಲಿ ನಡೆದ ಎರಡನೇ ಏಶಿಯನ್ ಜಂಪ್ರೋಪ್ ಚಾಂಪಿಯನ್ಶಿಪ್ನಲ್ಲಿ ಉತ್ತಮ ಸಾಧನೆ ತೋರಿ ತವರಿಗೆ ಮರಳಿದ ಡಿ.ಎ.ವಿ. ಪಬ್ಲಿಕ್ ಶಾಲೆಯ ಮಕ್ಕಳನ್ನುಶುಕ್ರವಾರ ನಗರದ ರೈಲು ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ಕ್ರೀಡಾಭಿಮಾನಿಗಳು, ವಿಕಾಸ ಸೇವಾ ಸಮಿತಿ ಹಾಗೂ ಕ್ರೀಡಾಪಟುಗಳ ಪೋಷಕರು ಸ್ಪರ್ಧಿಗಳಿಗೆ ಹೂಮಾಲೆ ಹಾಕಿ, ಸಿಹಿ ತಿನ್ನಿಸಿ ಶುಭ ಕೋರಿದರು.
ಶಾಲೆಯ ಜೆ. ಅನನ್ಯ, ಎಂ. ಶಶಾಂಕ್, ದೇವ್ ಕೆ. ರಾವಲ್, ತಲಾ ಒಂದು ಬೆಳ್ಳಿ, ಕಂಚಿನ ಪದಕ ಗೆದ್ದರೆ, ಕೃತಿಕಾ ಬೆಳ್ಳಿ ಪದಕ ಜಯಿಸಿದ್ದಾರೆ. ಎಂ. ದೀಪ್ತಿ, ಎಸ್.ಡಿ. ಚಿನ್ಮಯಿ, ಪಿ. ವರ್ಷಾ,ಆಮ್ನಾ, ತಲಾ ಎರಡು ಕಂಚಿನ ಪದಕಗಳನ್ನು ಗೆದ್ದು ಉತ್ತಮ ಸಾಧನೆ ತೋರಿದ್ದಾರೆ.ಇನ್ನುಳಿದಂತೆ ಮಂಜುಶ್ರೀ, ಸುಶಾಂತ್, ಪದ್ಮಾವತಿ, ವರ್ಷಾ, ತಲಾ ಒಂದೊಂದು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ರಾಜ್ಯ ಜಂಪ್ರೋಪ್ ಅಸೋಸಿಯೇಷನ್ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ಮಾತನಾಡಿ, ‘ನಮ್ಮೂರಿನ ಮಕ್ಕಳು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ’ ಎಂದರು.
ಅಸೋಸಿಯೇಷನ್ ಕಾರ್ಯದರ್ಶಿ ಅಬ್ದುಲ್ ರಜಾಕ್, ನಿರ್ಣಾಯಕರಾಗಿ ಪಾಲ್ಗೊಂಡಿದ್ದ ಮೊಹಮ್ಮದ್ ರಫೀಕ್, ಶಾಲೆಯ ಮುಖ್ಯಶಿಕ್ಷಕ ಸುಧಾಕರ್, ವಿಕಾಸ ಸೇವಾ ಸಮಿತಿಯ ಸುಧಾಕರ್ ಪೇಡಿ, ಅನಂತ ಜೋಷಿ, ಚಂದ್ರಕಾಂತ ಕಾಮತ್, ಎನ್.ಎಸ್. ರೇವಣಸಿದ್ದಪ್ಪ, ಡಾ. ದೇಶಪಾಂಡೆ ಇದ್ದರು.
ಆ. 16ರಿಂದ 18ರ ವರೆಗೆ ನಡೆದ ಚಾಂಪಿಯನ್ಶಿಪ್ನಲ್ಲಿ 15 ರಾಷ್ಟ್ರಗಳ ಸ್ಪರ್ಧಿಗಳು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.