ಹೊಸಪೇಟೆ: ‘ಕೇಂದ್ರ ಸರ್ಕಾರವು ಮೋಟಾರ್ ವಾಹನ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಆಟೊ ಚಾಲಕರು ಹೆಚ್ಚು ಎಚ್ಚರದಿಂದ ಕೆಲಸ ನಿರ್ವಹಿಸಬೇಕು‘ ಎಂದು ಫೆಡರೇಶನ್ ಆಫ್ ಕರ್ನಾಟಕ ಆಟೊ ರಿಕ್ಷಾ ಡ್ರೈವರ್ಸ್ ಯೂನಿಯನ್ ಅಧ್ಯಕ್ಷ ಕೆ.ಎಂ. ಸಂತೋಷ್ ಕುಮಾರ್ ತಿಳಿಸಿದರು.
ಸೋಮವಾರ ಸಂಜೆ ನಗರದಲ್ಲಿ ನಡೆದ ಆಟೊ ಚಾಲಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
‘ಕಾಯ್ದೆಗೆ ತಿದ್ದುಪಡಿ ಮಾಡಿದ ನಂತರ ಕಠಿಣವಾದ ನಿಯಮಗಳು ಜಾರಿಗೆ ಬಂದಿವೆ. ದುಬಾರಿ ದಂಡದ ಜತೆಗೆ ಜೈಲು ಶಿಕ್ಷೆ, ಚಾಲನಾ ಪರವಾನಗಿ ರದ್ದುಗೊಳಿಸುವಂತಹ ನಿಯಮಗಳು ಸೇರಿವೆ. ಹೀಗಾಗಿ ಚಾಲಕರು ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು’ ಎಂದು ಕಿವಿಮಾತು ಹೇಳಿದರು.
ವಿಜಯನಗರ ಆಟೊ ಚಾಲಕರ ಸಂಘದ ಕಾರ್ಯದರ್ಶಿ ರಾಮಚಂದ್ರ ಬಾಬು, ‘ಚಾಲಕರು ಎಲ್ಲ ರೀತಿಯ ದಾಖಲಾತಿಗಳನ್ನು ವಾಹನದಲ್ಲಿಯೇ ಇಟ್ಟುಕೊಳ್ಳಬೇಕು. ಅಧಿಕಾರಿಗಳು ಕೇಳಿದಾಗ ಕೊಡಬೇಕು. ಸಮವಸ್ತ್ರ ಧರಿಸಿಯೇ ಕೆಲಸ ನಿರ್ವಹಿಸಬೇಕು’ ಎಂದು ತಿಳಿಸಿದರು.
‘ಶಾಲಾ ಮಕ್ಕಳನ್ನು ಕರೆದೊಯ್ಯುವ ಆಟೊ ಚಾಲಕರು ಹೆಚ್ಚು ಎಚ್ಚರದಿಂದ ಕೆಲಸ ಮಾಡಬೇಕು. ನಿಗದಿತ ಸಂಖ್ಯೆಗೆ ಅನುಗುಣವಾಗಿ ಮಕ್ಕಳನ್ನು ಕರೆದುಕೊಂಡು ಹೋಗಬೇಕು. ಮಕ್ಕಳೊಂದಿಗೆ ಸರಿಯಾಗಿ ವರ್ತಿಸಬೇಕು’ ಎಂದು ಹೇಳಿದರು.
ಫೆಡರೇಶನ್ ಕಾರ್ಯದರ್ಶಿ ಜಿ. ಸಿದ್ದಲಿಂಗೇಶ್, ಉಪಾಧ್ಯಕ್ಷ ಸದಾನಂದ ಪಾಟೀಲ, ಖಜಾಂಚಿ ಎಸ್. ಅನಂತಶಯನ, ಬಿ.ಎಸ್. ಯಮುನಪ್ಪ, ರುದ್ರಪ್ಪ, ಹುಸೇನ್ ಬಾಬು, ಸುಭಾಷ್, ಕೃಷ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.