
ಕಂಪ್ಲಿ: ಇಲ್ಲಿನ ಗಂಗಾಸಂಕೀರ್ಣದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಘಟಕ ಶನಿವಾರ ಆಯೋಜಿಸಿದ್ದ 186ನೇ ಮಹಾಮನೆ ಕಾರ್ಯಕ್ರಮದಲ್ಲಿ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಮರಿಯಮ್ಮನಹಳ್ಳಿಯ ಕೆ. ನಾಗರತ್ನಮ್ಮ ಮತ್ತು ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸ್ಥಳೀಯ ಕೆ. ವಾಲ್ಮೀಕಿ ಈರಣ್ಣ ಅವರನ್ನು ಗೌರವಿಸಲಾಯಿತು.
ಇದಕ್ಕು ಮುನ್ನ ಬಳ್ಳಾರಿಯ ಬಿಐಟಿಎಂ ಕಾಲೇಜಿನ ಬಿಇ ಪದವಿ ವಿದ್ಯಾರ್ಥಿನಿ ಎಚ್.ಎನ್. ಚೈತ್ರಾ ‘ಶರಣ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆ’ ಕುರಿತು ಉಪನ್ಯಾಸ ನೀಡಿ, ಕಾಯಕ ನಿಷ್ಠೆ ಮತ್ತು ಮೌಲ್ಯಗಳು ಕ್ಷೀಣಿಸುತ್ತಿದ್ದು, ಪ್ರಾಮಾಣಿಕವಾಗಿ ದುಡಿಯದೆ ಬದುಕುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
‘ನನ್ನ ರಂಗಭೂಮಿ ಚಟುವಟಿಕೆಗೆ ಕಂಪ್ಲಿಯೇ ತವರೂರು. ಇಲ್ಲಿಯ ಸಂಗೀತ ನಿರ್ದೇಶಕ ವಾದಿರಾಜ, ಬಯಲಾಟದ ಮಾಸ್ತರ್ ಜೀರು ಶಿವಲಿಂಗಪ್ಪ, ರಂಗಭೂಮಿ ದಿಗ್ಗಜ ಭರಮಲಿಂಗಪ್ಪ ಹಾಗೂ ಕನ್ನಡ ಹಿತರಕ್ಷಕ ಸಂಘದವರು ನನ್ನ ಕಲಾ ಬೆಳವಣಿಗೆಗೆ ತುಂಬಾ ಸಹಕರಿಸಿದ್ದಾರೆ’ ಎಂದು ರಂಗಭೂಮಿ ಕಲಾವಿದೆ ಕೆ. ನಾಗರತ್ನಮ್ಮ ಸ್ಮರಿಸಿದರು.
ಪರಿಷತ್ ತಾಲ್ಲೂಕು ಘಟಕ ಅಧ್ಯಕ್ಷ ಜಿ. ಪ್ರಕಾಶ್, ರಂಗಭೂಮಿ ಕಲಾವಿದರಾದ ಜೀರು ಮಲ್ಲಿಕಾರ್ಜುನ, ಯು. ದೊಡ್ಡಬಸಪ್ಪ, ದಾಸರ ವೆಂಕಟೇಶ, ಎನ್. ದುರುಗಣ್ಣ, ಜಂಗಾ ವೀರೇಶ, ಚನ್ನಬಸಪ್ಪ, ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪದಾಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.