ADVERTISEMENT

ಡಿಕೆಶಿ ಸಿಎಂ ಆಗಲು ಸಿದ್ದರಾಮಯ್ಯ ಬಿಡಲ್ಲ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 5:27 IST
Last Updated 10 ಜುಲೈ 2025, 5:27 IST
ಶ್ರೀರಾಮುಲು 
ಶ್ರೀರಾಮುಲು    

ಬಳ್ಳಾರಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಲು ಬಿಡುವುದಿಲ್ಲ. ಒಳಗಡೆ ಮ್ಯಾಚ್‌ ಫಿಕ್ಸಿಂಗ್‌ ಆಗಿರುವುದರಿಂದ ಯಾವುದೇ ಕಾರಣಕ್ಕೂ ಡಿಕೆಶಿ ಅವರು ಸಿಎಂ ಆಗುವುದಿಲ್ಲ’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಎರಡೂವರೆ ವರ್ಷಗಳ ಆಡಳಿತ ನಡೆಸುತ್ತಿದೆ. ಈಗ ಡಿಕೆಶಿ ಸಿಎಂ ಆಗಲು ನಾನಾ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ತಮ್ಮ ಖುರ್ಚಿಯನ್ನು ಭದ್ರಮಾಡಿಕೊಳ್ಳಲು ತಮ್ಮ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಸುರ್ಜೇವಾಲ ಅವರು ಕಾಂಗ್ರೆಸ್‌ ಶಾಸಕರೊಂದಿಗೆ ಚರ್ಚೆ ಮಾಡುತ್ತಿದ್ದಾರೆ. ಸಿಎಂ, ಡಿಸಿಎಂ ಅವರು ಈಗಾಗಲೇ ದೆಹಲಿಯಲ್ಲಿ ಕುಳಿತಿದ್ದು, ದೊಡ್ಡ ಬದಲಾವಣೆಯಾಗುವ ಸಾಧ್ಯತೆಗಳಿವೆ. ಈ ಎಲ್ಲ ಗೊಂದಲಗಳಿಗೆ ಕಾಂಗ್ರೆಸ್‌ ನಾಯಕರು ರಾಜ್ಯದ ಜನತೆಗೆ ಸ್ಪಷ್ಟನೆ ಕೊಡಬೇಕು’ ಎಂದು ಒತ್ತಾಯಿಸಿದರು.

‘ಸಿಎಂ ಸಿದ್ದರಾಮಯ್ಯ ಅವರು ಶಿಕ್ಷಣ, ಸಾರಿಗೆ, ಆರೋಗ್ಯ ಸೇರಿ ಎಲ್ಲಇಲಾಖೆಗಳನ್ನು ದಿವಾಳಿ ಮಾಡಿದ್ದಾರೆ. ಬಳ್ಳಾರಿ ನಗರ ಸೇರಿ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿಯಾಗುತ್ತಿಲ್ಲ. ಆಡಳಿತ ಪಕ್ಷದಲ್ಲಿರುವ ಸದಸ್ಯರಿಗೆ ಮಾತ್ರ ಅನುದಾನ ನೀಡುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ. ಈ ಎಲ್ಲ ಬೆಳವಣಿಗೆಯಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ’ ಎಂದು ದೂರಿದರು.

ADVERTISEMENT

ರಾಜ್ಯದಿಂದ ರಾಷ್ಟ್ರ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರನ್ನು ತೊಡಗಿಸಲು ಹಿಂದುಳಿದ ಸಮುದಾಯಗಳ ಸಮಿತಿಗೆ ಅವರನ್ನು ನೇಮಿಸಲಾಗಿದೆ. ಆದರೆ, ಸಿದ್ದರಾಮಯ್ಯ ಅವರು ರಾಜಕಾರಣದಲ್ಲಿ ಪಳಗಿರುವ ವ್ಯಕ್ತಿ. ಸಿಎಂ ಸ್ಥಾನ ಬಿಟ್ಟುಕೊಡಲು ಸಿದ್ಧರಿಲ್ಲ. ಹೀಗಾಗಿ ಡಿಕೆಶಿ ಅವರನ್ನು ಸೈಡ್‌ ಲೈನ್‌ ಮಾಡಲು ಎಸ್ಸಿ, ಎಸ್ಟಿ ಸಮುದಾಯದವರನ್ನು ಸಿಎಂ ಮಾಡಬೇಕೆಂದು ಎತ್ತಿಕಟ್ಟುತ್ತಿದ್ದಾರೆ. ಇದರ ಹೊರತಾಗಿಯೂ ಕೃಷ್ಣ ಬೈರೇಗೌಡ ಅವರ ಹೆಸರು ಸಿಎಂ ಸ್ಥಾನಕ್ಕೆ ಕೇಳಿಬರುತ್ತಿದೆ. ಈ ಎಲ್ಲಬೆಳವಣಿಗೆ ನಡುವೆ ಡಿಕೆಶಿ ಮಂಕಾಗಿದ್ದಾರೆ. ರಾಜ್ಯದ ಜನತೆ ಈ ಸರ್ಕಾರಕ್ಕೆ ಗುಡ್‌ಬಾಯ್‌ ಹೇಳುವ ಸಮಯ ಬಂದಿದೆ. ಮಧ್ಯಂತರ ಚುನಾವಣೆ ಬಂದರೂ ಬಿಜೆಪಿ ಎದುರಿಸುವ ಶಕ್ತಿಯಿದೆ’ ಎಂದು ತಿಳಿಸಿದರು.

‘ಬಳ್ಳಾರಿ ಗ್ರಾಮೀಣ ಶಾಸಕರ ಪರಿಸ್ಥಿತಿ ಆಯ ರಾಮ್‌ ಘಯಾ ರಾಮ್‌ ಎನ್ನುವಂತಾಗಿದೆ. ಅವರು ಕೇವಲ ರೀಲ್ಸ್‌, ಫೋಟೋಗಳಿಗೆ ಮಾತ್ರ ಸೀಮಿತವಾಗಿದ್ದಾರೆ’ ಎಂದು ಟೀಕಿಸಿದರು.

‘ನಾನು ಕೂಡ್ಲಿಗಿಯಲ್ಲಿ ಸ್ಪರ್ಧೆ ಮಾಡುವ ಇಚ್ಛೆಯನ್ನು ಹೊಂದಿರುವುದು ನಿಜ’ ಎಂದು ಇದೇ ವೇಳೆ  ಶ್ರೀರಾಮುಲು ಖಚಿತಪಡಿಸಿದರು.

‘ವಾಲ್ಮೀಕಿ ಹಗರಣ: ಪುರಾವೆ ಲಭ್ಯ’
  ‘ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರು ಇದ್ದಾರೆ. ಮೂರು ವರ್ಷಗಳ ನಂತರ ಬದಲಾವಣೆ ಮಾಡುವ ಅವಶ್ಯಕತೆ ಬಂದರೆ ಮುಂದಿನ ನಿರ್ಧಾರ ಪಕ್ಷದಿಂದ ಕೈಗೊಳ್ಳಲಿದೆ. ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಶಾಸಕ ಭರತ್‌ ರೆಡ್ಡಿ ಜೆ.ಎನ್‌.ಗಣೇಶ್‌ ಬಿ.ನಾಗೇಂದ್ರ ಡಾ.ಶ್ರೀನಿವಾಸ್‌ ಅವರು ವಾಲ್ಮೀಕಿ ನಿಗಮದ ಹಣವನ್ನು ತಂದು ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದ್ದಾರೆ. ಈ ಬಗ್ಗೆ ಡಿಜಿಟಲ್‌ ಪುರಾವೆಗಳು ಸಹ ಸಿಕ್ಕಿವೆ. ಇಡಿ ತನಿಖೆ ನಡೆಸಿದ ಬಳಿಕ ಈಗ ಸಿಬಿಐ ಪ್ರವೇಶಿಸಿದೆ. ತನಿಖೆ ವೇಳೆ ನಾಗೇಂದ್ರ ಅವರು ಪುನಃ ಜೈಲಿಗೆ ಹೋದರೂ ಆಶ್ಚರ್ಯವಿಲ್ಲ’ ಎಂದು ಹೇಳಿದರು.  ‘ದೇಶದಲ್ಲಿ ಸರ್ಕಾರದ ಹಣವನ್ನು ತಿಂದವರು ತಪ್ಪಿಸಿಕೊಂಡ ಇತಿಹಾಸವಿಲ್ಲ. ಹೀಗಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ’ ಎಂದು ಶ್ರೀರಾಮುಲು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.