ಬಳ್ಳಾರಿ: ಬಳ್ಳಾರಿಯ ಅವ್ವಂಬಾವಿಯಲ್ಲಿರುವ ಶಾಸಕ ಜನಾರ್ದನ ರೆಡ್ಡಿ ಅವರ ನಿವಾಸದ ಬಳಿ ಗುರುವಾರ ರಾತ್ರಿ ನಡೆದ ಘರ್ಷಣೆ ಮತ್ತು ಯುವಕನ ಸಾವಿಗೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ಹಿತೇಂದ್ರ ಆರ್. ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ ಪ್ರತ್ಯೇಕ ದೂರು ಆಧರಿಸಿ ಮೂರು ಪ್ರಕರಣ, ಒಂದು ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ. ಯುವಕನ ಸಾವು, ಮಹರ್ಷಿ ವಾಲ್ಮೀಕಿಗೆ ಅಪಮಾನ, ಹಲ್ಲೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ’ ಎಂದು ಅವರು ತಿಳಿಸಿದರು.
ಬಳ್ಳಾರಿಯ ರಾಜಕೀಯ ಮುಖಂಡರ ಖಾಸಗಿ ಅಂಗರಕ್ಷಕರ ಐದು ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ. ಅವರ ಆಪ್ತರ ಬಂದೂಕುಗಳನ್ನೂ ಪತ್ತೆ ಮಾಡಲಾಗುತ್ತಿದೆ. ಸದ್ಯ ಸಿಕ್ಕಿರುವ ಬಂದೂಕುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ರವಾನಿಸಲಾಗಿದೆ. ಜನಾರ್ದನ ರೆಡ್ಡಿ ಅವರ ಬಳಿ ಬಂದೂಕು ಇಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಆದರೂ ತಪಾಸಣೆ ಮಾಡುವಂತೆ ತಿಳಿಸಲಾಗಿದೆ. ನಮ್ಮ ಸ್ಥಳೀಯ ಸಿಬ್ಬಂದಿ ಯಾರೂ ಬಂದೂಕು ಪ್ರಯೋಗಿಸಿಲ್ಲ. ಮೃತ ರಾಜಶೇಖರ ಅವರ ದೇಹದಲ್ಲಿ ಸಿಕ್ಕ ಗುಂಡು ಮತ್ತು ವಶಕ್ಕೆ ಪಡೆದಿರುವ ಬಂದೂಕುಗಳನ್ನು ಹೋಲಿಕೆ ಮಾಡಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಯಾರೇ ತಪ್ಪು ಮಾಡಿದ್ದರೂ, ಕಾನೂನು ಕ್ರಮ ಜರಗಿಸುತ್ತೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.