ಬಳ್ಳಾರಿ: ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಬೀಜಕಾಯ್ದೆ, ವಿದ್ಯುತ್ ಕಾಯ್ದೆಗಳಿಗೆ ಸರ್ಕಾರ ತಂದಿರುವ ತಿದ್ದುಪಡಿಗಳನ್ನು ವಿರೋಧಿಸಿ, ಜೂ.27ರಿಂದ 30ರವರೆಗೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯ್ತಿ ಕಚೇರಿಗಳ ಎದುರು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ವತಿಯಿಂದ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಮುಖಂಡರು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾಗಳು ಸಂವಿಧಾನವನ್ನು ಗಾಳಿಗೆ ತೂರಿ ಕಾಯ್ದೆಗಳಿಗೆ ತಿದ್ದುಪಡಿ ತರಲು ಮುಂದಾಗಿದೆ. ತಿದ್ದುಪಡಿಗಳ ಮೂಲಕ ರೈತರನ್ನು ಬೀದಿಗೆ ತರಲು ಹೊರಟಿದೆ. ಭೂಸುಧಾರಣಾ ಕಾಯ್ದೆಯಿಂದ ಸಣ್ಣ ರೈತರು ಭೂಮಿ ಕಳೆದುಕೊಳ್ಳಲಿದ್ದಾರೆ. ಸರ್ಕಾರ ಎಪಿಎಂಸಿ ಕಾಯ್ದೆ ಮೂಲಕ ಮಾರುಕಟ್ಟೆಗಳನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಲು ಮುಂದಾಗಿವೆ ಎಂದು ಸಮಿತಿಯ ಮುಖಂಡ ವಿ.ಎಸ್.ಶಿವಶಂಕರರೆಡ್ಡಿ ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ 'ಉಳುವವನೇ ಭೂಮಿಯ ಒಡೆಯ' ಹೋಗಿ ಕಾಸಿದ್ದವನೇ ಭೂಮಿಯ ಒಡೆಯನಾಗುತ್ತಾನೆ. ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿದ್ದವರು, ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ನಿರುದ್ಯೋಗ ಸೃಷ್ಟಿಗೆ ಕಾರಣರಾಗುತ್ತಿದ್ದಾರೆ ಎಂದರು.
ವಿದ್ಯುತ್ ಖಾಸಗೀಕರಣವಾದರೆ ಪಂಪಸೆಟ್ ನಡೆಸಲು ಸಾಧ್ಯವಾಗುವುದಿಲ್ಲ. ಲಾಕ್ ಡೌನ್ ನಲ್ಲಿ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ. ಕಾಯ್ದೆಗಳ ತಿದ್ದುಪಡಿ ಹಿಂಪಡೆದು ರೈತರನ್ನು ರಕ್ಷಿಸಬೇಕೆಂದು ಎಂದು ಸಮಿತಿ ಮುಖಂಡ ಆರ್.ಮಾಧವರೆಡ್ಡಿ ಆಗ್ರಹಿಸಿದರು.
ರಾಜ್ಯದಾದ್ಯಂತ ಸಾವಿರಕ್ಕೂ ಹೆಚ್ಚಿನ ಗ್ರಾ.ಪಂ ಗಳ ಮುಂದೆ ಹಮಾಲರು, ಕೃಷಿಕರು, ಕೂಲಿಕಾರ್ಮಿಕರು, ವಿವಿಧ ಸಂಘಟನೆಗಳು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯಡಿ ಪ್ರತಿಭಟಿಸಲಿವೆ ಎಂದರು.
ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಗಳು ರೈತರನ್ನು ಬೀದಿಗೆ ತಳ್ಳಲಿವೆ. ಜನರು ಕೊರೊನಾ ಆತಂಕದಲ್ಲಿದ್ದರೆ, ಸರ್ಕಾರ ಅದನ್ನು ಬಳಸಿಕೊಂಡು ಸುಗ್ರಿವಾಜ್ಞೆ ಮೂಲಕ ತಿದ್ದುಪಡಿಗೆ ಮುಂದಾಗಿದೆ ಎಂದು ಗೋವಿಂದ್ ಆರೋಪಿಸಿದರು.
ಸಮಿತಿಯ ಈ.ಹನುಂತಪ್ಪ, ಸಂಗನಕಲ್ಲು ಕೃಷ್ಣಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.