
ತೆಕ್ಕಲಕೋಟೆ: ಮೋಕಾ ಪೊಲೀಸ್ ಠಾಣಾ ವ್ಯಾಪ್ತಿಯ ಬಾಣಾಪುರ ಶಾಖೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ದರೋಡೆ ಮಾಡಲು ಯತ್ನಿಸಿದ ಘಟನೆ ಈಚೆಗೆ ನಡೆದಿದೆ.
ಡಿ.1ರ ಸೋಮವಾರ ಬ್ಯಾಂಕಿಗೆ ಉದ್ಯೋಗಿ ನವೀನ್ ಬಂದ ಸಂದರ್ಭದಲ್ಲಿ ಬ್ಯಾಂಕಿನ ಕಿಟಕಿ ಮುರಿದದ್ದು ಕಂಡುಬಂದಿದೆ. ಅನುಮಾನಗೊಂಡ ಅವರು ತಕ್ಷಣವೆ ಮೇಲಾಧಿಕಾರಿಗೆ ತಿಳಿಸಿದ್ದಾರೆ.
ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಇ. ಮನೋಹರ್ ಸ್ಥಳಕ್ಕೆ ಧಾವಿಸಿದಾಗ, ಬ್ಯಾಂಕಿನ ಹಿಂಭಾಗದ ಕಿಟಕಿಯ ಕಬ್ಬಿಣದ ಗ್ರಿಲ್ ಮುರಿದಿದ್ದು, ಬ್ಯಾಂಕಿನ ಸೇಫ್ ರೂಮ್ನ ಗ್ರಿಲ್ ಗೇಟ್ ಲಾಕ್ ಬ್ರೇಕ್ ಮಾಡಿದ್ದು ಕಂಡುಬಂದಿದೆ.
ತಕ್ಷಣವೇ ಸಿಸಿಟಿವಿ ಪರಿಶೀಲಿಸಿದಾಗ ನಸುಕಿನ ಜಾವ ಬೆಳಿಗ್ಗೆ 1.00 ರಿಂದ 3. 20 ಅವಧಿಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಬ್ಯಾಂಕಿನ ಶಾಖೆಯ ಕಿಟಕಿಯನ್ನು ಬ್ರೇಕ್ ಮಾಡಿ, ಅವರಲ್ಲಿ ಒಬ್ಬರು ಬ್ಯಾಂಕಿನ ಒಳಗಡೆ ಪ್ರವೇಶಿಸಿ ಕ್ಯಾಶ್ ಕೌಂಟರ್ ನಲ್ಲಿ ಹೋಗಿ ನಂತರ ಸುರಕ್ಷತಾ ಕೊಠಡಿ ಲಾಕ್ ಬ್ರೇಕ್ ಮಾಡಿ ಒಳಗಡೆ ಪ್ರವೇಶಿಸಿದ್ದಾರೆ. ಅಲರಾಂ ತಕ್ಷಣವೇ ಸೈರನ್ ಮೊಳಗಿಸಿದೆ. ಇದರಿಂದಾಗಿ ಕಳ್ಳರು ಪರಾರಿಯಾಗಿದ್ದಾರೆ.
ಬ್ಯಾಂಕಿನಲ್ಲಿ ಯಾವುದೇ ನಗದು, ಬೆಲೆ ಬಾಳುವ ವಸ್ತು ಅಥವಾ ಇತರೇ ವಸ್ತುಗಳು ಕಳುವಾಗಿಲ್ಲ ಎಂದು ವ್ಯವಸ್ಥಾಪಕ ಮೋಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶನಿವಾರ ಠಾಣೆಗೆ ಬಳ್ಳಾರಿ ಜಿಲ್ಲಾ ಎಸ್ ಪಿ ಶೋಭಾರಾಣಿ ವಿ.ಜೆ ಭೇಟಿ ನೀಡಿ ತನಿಖಾ ಪ್ರಗತಿಯ ಕುರಿತು ಪರಿಶೀಲಿಸಿ ಮುಂದಿನ ತನಿಖೆಯ ಬಗ್ಗೆ ಸೂಕ್ತವಾದ ಸಲಹೆ, ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.