
ಬಳ್ಳಾರಿ: ಬಳ್ಳಾರಿಯ ಶ್ರೀ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಅವ್ಯವಹಾರ ನಡೆಯುತ್ತಿದ್ದು, ಸೂಕ್ತ ತನಿಖೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್, ಭಜರಂಗದಳ ಆಗ್ರಹಿಸಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
‘ದೇವಸ್ಥಾನದಲ್ಲಿ ಅವ್ಯವಹಾರ ನಡೆಯುತ್ತಿದೆ. ಲೆಕ್ಕ ಪರಿಶೋಧನೆಯಲ್ಲೂ ಇದು ಬಯಲಾಗಿದೆ. ಲೆಕ್ಕಪತ್ರದಲ್ಲಿ ಬಹಳ ವ್ಯತ್ಯಾಸಗಳು ಇರುವುದನ್ನು ಪರಿಶೋಧಕರು ಸ್ಪಷ್ಟವಾಗಿ ತಿಳಿಸಿದ್ದಾರೆ. ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಇದರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅವ್ಯವಹಾರ ಮುಂದುವರಿಸುತ್ತಿದ್ದಾರೆ’ ಎಂದು ಸಂಘಟನೆ ಆರೋಪಿಸಿದೆ.
ದೇಗುಲದ ರಶೀದಿಗಳು ಅಧಿಕೃತವಾಗಿಲ್ಲ. ಟೆಂಡರ್ ಇಲ್ಲದೇ ಒಂದು ಲಕ್ಷ ಮೇಲ್ಪಟ್ಟ ಕೆಲಸಗಳನ್ನು ಮಾಡಿಸಿದ್ದಾರೆ. ಟೆಂಡರ್ ಇಲ್ಲದೇ ₹2 ಕೋಟಿ ವರೆಗೂ ಕೆಲಸ ಮಾಡಲಾಗಿದೆ. 20 ಮಂದಿ ಭದ್ರತಾ ಸಿಬ್ಬಂದಿಯನ್ನು ಟೆಂಡರ್ ಇಲ್ಲದೇ ನೇಮಿಸಲಾಗಿದೆ. ನಗದು ಕೌಂಟರ್ನಲ್ಲಿ ಸಿ.ಸಿ. ಕ್ಯಾಮೆರಾ ಇಲ್ಲ. ಕಾರ್ಯನಿರ್ವಾಹಕ ಅಧಿಕಾರಿ ಅಳಿಯ ಮಹಂತೇಶ್ ಕ್ಯಾಷ್ ಕೌಂಟರ್ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿ ದಿನ ನಿತ್ಯ ಮಧ್ಯಾಹ್ನ 1 ರಿಂದ 3ರವರೆಗೆ ದಾಸೋಹ ನಡೆಯುತ್ತಿದ್ದು, ಇದಕ್ಕೆ ಬೇಕಾದ ಸಾಮಾಗ್ರಿಗಳನ್ನು ಭಕ್ತರು ನೀಡುತ್ತಿದ್ದಾರೆ. ಇದರ ಲೆಕ್ಕಾಚಾರಗಳು ಇಲ್ಲ’ ಎಂದು ಸಂಘಟನೆ ಆರೋಪಿಸಿದೆ.
‘ದೇಗುದಲ್ಲಿನ ಸಮಸ್ಯೆಗಳ ಬಗ್ಗೆ ಅರ್ಚಕರು ಮತ್ತು ಅಧಿಕಾರಿಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. 2012 ರಿಂದ ಪ್ರಥದ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, 2016 ರಿಂದ ಉಸ್ತುವಾರಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಇಂದಿನವರೆಗೂ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಸತತ 13 ವರ್ಷಗಳಿಂದ ಒಂದೇ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಆಶ್ಚರ್ಯಕರ ಎನಿಸಿದೆ’ ಎಂದು ಸಂಘಟನೆ ಆರೋಪಿಸಿದೆ.
ಇದೆಲ್ಲದರ ಸಮಗ್ರ ತನಿಖೆ ನಡೆಸಿ, ದೇಗುದಲ ವ್ಯವಸ್ಥೆ ಸರಿಪಡಿಸಬೇಕು ಎಂದು ನಗರ ಅಧ್ಯಕ್ಷ ಅಶೋಕ್ ಚೌಹಾಣ್ ಆಗ್ರಹಿಸಿದ್ದಾರೆ. ವಿನೋದ್ ಬಾಗ್ಡೆ, ಶಂಕರ್, ಚಾನಾಳು ವಿಷ್ಣುವರ್ಧನ ರೆಡ್ಡಿ, ಕೆ. ಅಶೋಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.