ಬಳ್ಳಾರಿ: ಅಂಗಾಂಗ ದಾನಕ್ಕೆ 5,000 ಜನರಿಂದ ಪ್ರತಿಜ್ಞೆ (ನೋಂದಣಿ) ಮಾಡಿಸಿದ ರಾಷ್ಟ್ರದ ಮೊದಲ ಜಿಲ್ಲೆ ಎಂಬುದಕ್ಕೆ ಬಳ್ಳಾರಿ ಪಾತ್ರವಾಗಿದೆ. ಇದು ಹೊಸ ಮೈಲುಗಲ್ಲು ಆಗಿದ್ದು, ದೇಶದ ಬೇರೆ ಯಾವ ಜಿಲ್ಲೆಯಲ್ಲೂ ಇಂತಹ ಸಾಧನೆ ಆಗಿಲ್ಲ.
ಬಳ್ಳಾರಿ ನಂತರದ ಸ್ಥಾನದಲ್ಲಿ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆ ಇದ್ದು, ಅಲ್ಲಿ ಈ ವರ್ಷ ಈವರೆಗೆ 4,382 ಮಂದಿ ಅಂಗಾಂಗ ದಾನದ ವಾಗ್ದಾನ ಮಾಡಿದ್ದಾರೆ. 3,745 ನೋಂದಣಿಯೊಂದಿಗೆ ಧಾರವಾಡ ಮೂರನೇ ಸ್ಥಾನದಲ್ಲಿದೆ.
‘ಅಂಗಾಂಗ ದಾನಕ್ಕೆ ಜನರನ್ನು ಉತ್ತೇಜಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ರಕ್ತದಾನ ಶಿಬಿರ, ತಾಯಂದಿರ ಸಭೆಗಳಲ್ಲಿ ನಿರಂತರ ಜಾಗೃತಿ ಮೂಡಿಸಲಾಗಿತ್ತು. ತಿಂಗಳಿಗೆ 500ರಂತೆ ಮುಂದಿನ ವರ್ಷ ಮಾರ್ಚ್ ವೇಳೆಗೆ ನೋಂದಣಿಯನ್ನು 7 ಸಾವಿರಕ್ಕೆ ಏರಿಸುವ ಗುರಿಯಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಮೇಶ್ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.
ಮಿದುಳು ನಿಷ್ಕ್ರಿಯಗೊಂಡ ಒಬ್ಬ ವ್ಯಕ್ತಿಯು ಹೃದಯ, ಕಣ್ಣು, ಯಕೃತ್, ಶ್ವಾಸಕೋಶ, ಮೂತ್ರಪಿಂಡ ಸೇರಿ ಹಲವು ಅಂಗ ಮತ್ತು ಅಂಗಾಂಶಗಳನ್ನು ದಾನ ಮಾಡಬಹುದು. ಸ್ವಾಭಾವಿಕವಾಗಿ ಮೃತಪಟ್ಟ ವ್ಯಕ್ತಿಯಿಂದ ಪ್ರಧಾನವಾಗಿ ಕಣ್ಣನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ.
ಅಂಗಾಂಗ ದಾನಕ್ಕೆ ನೋಂದಣಿಯಾದರೆ ‘ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ’ಯು ವ್ಯಕ್ತಿಯ ಮೊಬೈಲ್, ಆಧಾರ್ ಸಂಖ್ಯೆಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ನೋಂದಣಿ ಬಗ್ಗೆ ಕಾರ್ಡ್ವೊಂದನ್ನು ನೀಡಿರುತ್ತದೆ. ಸಂದರ್ಭ ಬಂದಾಗ ಈ ಬಗ್ಗೆ ಸಂಬಂಧಿಸಿದವರ ಕುಟುಂಬಸ್ಥರಿಗೆ ತಿಳಿಸುವ ಸಂಸ್ಥೆ ಅಂಗಾಂಗ ಪಡೆಯುವ ಕಾರ್ಯ ಆರಂಭಿಸುತ್ತದೆ.
ದೇಶದಲ್ಲಿ 2 ಲಕ್ಷ ದಾಟಿದ ನೋಂದಣಿ
ದೇಶದಲ್ಲಿ ಡಿಸೆಂಬರ್ 6ರ ವರೆಗೆ ಒಟ್ಟು 2 ಲಕ್ಷ ಜನ ಅಂಗಾಂಗ ದಾನಕ್ಕೆ ಹೆಸರು ಕೊಟ್ಟಿದ್ದಾರೆ. ಇದರಲ್ಲಿ ರಾಜಸ್ಥಾನ (40,400) ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ(31,214), ಮೂರನೇ ಸ್ಥಾನದಲ್ಲಿ ಕರ್ನಾಟಕ (25,658), ನಾಲ್ಕನೇ ಸ್ಥಾನದಲ್ಲಿ ಮಧ್ಯಪ್ರದೇಶ (21492) ಮತ್ತು ಐದನೇ ಸ್ಥಾನದಲ್ಲಿ ತೆಲಂಗಾಣ (13,620) ಇದೆ.
ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಲು ಸಂಪರ್ಕಿಸಬೇಕಾದ ವೆಬ್ಸೈಟ್: https://notto.abdm.gov.in/register
ಅಂಗಾಂಗ ದಾನದ ಬಗ್ಗೆ ಸಮಾಜ ಇನ್ನೂ ಜಾಗೃತವಾಗಿಲ್ಲ. ಸುಶಿಕ್ಷಿತರೇ ಇದಕ್ಕೆ ಹಿಂದೇಟು ಹಾಕುತ್ತಾರೆ. ಜತೆಗೆ ಮೌಢ್ಯವೂ ಕೆಲವರಲ್ಲಿದೆ. ಇದೆಲ್ಲದರ ನಡುವೆಯೂ ಬಳ್ಳಾರಿ ದೇಶಕ್ಕೇ ಮಾದರಿಯಾಗಿದೆ.– ರಮೇಶ್ ಬಾಬು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.