ADVERTISEMENT

ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ವಿಷಾದ ಕರ್ಣನಂತಾದ ಬಳ್ಳಾರಿ: ಪನ್ನರಾಜ್ ವಿಷಾದ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 5:57 IST
Last Updated 17 ಸೆಪ್ಟೆಂಬರ್ 2020, 5:57 IST
ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ‌ ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೇರಿ‌ ಪನ್ನರಾಜ್ ಮಾತನಾಡಿದರು.
ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ‌ ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೇರಿ‌ ಪನ್ನರಾಜ್ ಮಾತನಾಡಿದರು.   

ಬಳ್ಳಾರಿ: 'ಕಲ್ಯಾಣ ಕರ್ನಾಟಕ ಆರು ಜಿಲ್ಲೆಗಳ ಪೈಕಿ ಬಳ್ಳಾರಿಯು ಕರ್ಣನಂತಾಗಿದೆ' ಎಂದುಕಲ್ಯಾಣ ಕರ್ನಾಟಕ ಹೋರಾಟ ಸಮಿತಿ‌ ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೇರಿ‌ ಪನ್ನರಾಜ್ ವಿಷಾದಿಸಿದರು.

ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಗುರುವಾರ ಜಿಲ್ಲಾಡಳಿತ ಏರ್ಪಾಡಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, '1990ರಲ್ಲಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆಯಾದಾಗ ಬಳ್ಳಾರಿ ಜಿಲ್ಲೆಯನ್ನು‌ ಹೊರಗೆ ಇಡಲಾಗಿತ್ತು. ಸುದೀರ್ಘ ಹೋರಾಟದ ಮೂಲಕವೇ ಸೇರ್ಪಡೆಯಾಯಿತು' ಎಂದು ಸ್ಮರಿಸಿದರು.

'ಜಿಲ್ಲೆಯು 1947ರ ಆಹಸ್ಟ್ 15ರಂದೇ ಸ್ವಾತಂತ್ರ್ಯ ಪಡೆದಿದ್ದರೂ ಸಾಂಸ್ಕೃತಿಕ ಹಾಗೂ ಸಮಸ್ಯಾತ್ಮಕವಾಗಿ ಕಲ್ಯಾಣ ಕರ್ನಾಟಕದ ಇತರ ಜಿಲ್ಲೆಗಳೊಂದಿಗೆ ಸಾಮ್ಯತೆ ಹೊಂದಿದೆ. 1792ರಿಂದ 1800ರವರೆಗೆ ಜಿಲ್ಲೆ ನವಾಬನ ಆಡಳಿತಕ್ಕೆ ಒಳಪಟ್ಟಿತ್ತು. 1800ರಲ್ಲಿ ನವಾಬ ಬ್ರಿಟಿಷರ ನೆರವು ಕೋರಿದಾಗ ಬಳ್ಳಾರಿ ಜಿಲ್ಲೆ ಮದ್ರಾಸ್ ಪ್ರಾಂತಕ್ಕೆ ಸೇರಿತ್ತು. 1963ರಿಂದ ಬಳ್ಳಾರಿ ಜಿಲ್ಲೆ ಕಲಬುರಗಿ ವಿಭಾಗದ ಆಡಳಿತಕ್ಕೆ ಒಳಪಟ್ಟಿದೆ. ಆದರೂ, ಜಿಲ್ಲೆಯನ್ನು ಕಡೆಗಣಿಸಲಾಗುತ್ತಿದೆ' ಎಂದು ಆರೋಪಿಸಿದರು.

ADVERTISEMENT

'ಕಲ್ಯಾಣ ಕರ್ನಾಟಕ ಉತ್ಸವ ಜಿಲ್ಲೆಯ ಜನರಿಗೆ ಸಂಭ್ರಮ ತಂದಿಲ್ಲ' ಎಂದರು.

ಬಳ್ಳಾರಿಗೆ ₹ 862 ಕೋಟಿ ಹಂಚಿಕೆ

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆ ಅಡಿ ಜಿಲ್ಲೆಗೆ 2013-14 ನೇ ಸಾಲಿನಿಂದ 2019-20 ನೇ ಸಾಲಿನವರೆಗೆ ₹ 862 ಕೋಟಿ ಹಂಚಿಕೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ತಿಳಿಸಿದರು.

ನಗರದಲ್ಲಿ ಗುರುವಾರ ಕಲ್ಯಾಣ ಕರ್ನಾಟಕ‌ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 'ಇದುವರೆಗೆ ₹ 598 ಕೋಟಿ ವೆಚ್ಚ ಮಾಡಿ 3341 ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು 2904 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ' ಎಂದು ಮಾಹಿತಿ ನೀಡಿದರು.

'ಕಲ್ಯಾಣ ಕರ್ನಾಟಕ ದ ಆರೂ ಜಿಲ್ಲೆಗಳಲ್ಲಿ ಶೇ 80 ರಷ್ಟು ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿ ಕಲ್ಪಿಸಲಾಗಿದೆ. ಇತರೆ ಜಿಲ್ಲೆಗಳಲ್ಲಿ ಈ ಭಾಗದ ಜನರಿಗೆ ಶೇ 8 ರಷ್ಟು ಮೀಸಲಾತಿ‌ ಕಲ್ಪಿಸಲಾಗಿದೆ. ಜಿಲ್ಲೆಯ 1,41,877 ಮಂದಿಗೆ 371ಜೆ ಪ್ರಮಾಣ ಪತ್ರಗಳನ್ನು ವಿತರಿಸಲಾಗಿದೆ' ಎಂದು ಹೇಳಿದರು.

ಕೋವಿಡ್19 ಕಾರಣದಿಂದಾಗಿ ಉತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಮುಂದಿನ ವರ್ಷ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಹೇಳಿದರು.

ಉಸ್ತುವಾರಿ ಸಚಿವ ಆನಂದ ಸಿಂಗ್ ಧ್ವಜಾರೋಹಣ ಮಾಡಿದರು. ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.