ADVERTISEMENT

ನಾರಾ ಭರತ್‌ ರೆಡ್ಡಿ ಸ್ವತಃ ದಂಧೆಯಲ್ಲಿ ತೊಡಗಿದ್ದಾನೆ: ಜನಾರ್ದನ ರೆಡ್ಡಿ ಆರೋಪ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 5:26 IST
Last Updated 3 ಜನವರಿ 2026, 5:26 IST
ಗುರುವಾರ ರಾತ್ರಿ ಗುಂಪಿನಲ್ಲಿ ಗುಂಡು ಹಾರಿಸಿದವರ ವಿಡಿಯೊವನ್ನು ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಶ್ರೀರಾಮುಲು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶನ ಮಾಡಿದರು. 
ಗುರುವಾರ ರಾತ್ರಿ ಗುಂಪಿನಲ್ಲಿ ಗುಂಡು ಹಾರಿಸಿದವರ ವಿಡಿಯೊವನ್ನು ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಶ್ರೀರಾಮುಲು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶನ ಮಾಡಿದರು.    

ಬಳ್ಳಾರಿ: ‘ಬಳ್ಳಾರಿ ನಗರ ಶಾಸಕ ನಾರಾ ಭರತ್‌ ರೆಡ್ಡಿ ಸ್ವತಃ ದಂಧೆಯಲ್ಲಿ ತೊಡಗಿದ್ದಾನೆ. ಹೀಗಾಗಿ ಕಾಂಗ್ರೆಸ್‌ ಪಕ್ಷ ಇಲ್ಲಿ ಜನರ ಪ್ರೀತಿ ಕಳೆದುಕೊಂಡಿದೆ. ಅದನ್ನು ಮರೆ ಮಾಚಲು ಇಷ್ಟೆಲ್ಲ ಮಾಡಲಾಗಿದೆ’ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದರು. 

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭರತ್‌ ರೆಡ್ಡಿ ಮಟ್ಕಾ ದಂಧೆ ನಡೆಸುತ್ತಿದ್ದಾನೆ. ಲಂಚ, ಮರಳು ಅಕ್ರಮ, ವರ್ಗಾವಣೆ ದಂಧೆ ಜಿಲ್ಲೆಯಲ್ಲಿ  ಹೆಚ್ಚಾಗಿದೆ’ ಎಂದು ನೇರವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್‌ ಪಕ್ಷ ಜಿಲ್ಲೆಯಲ್ಲಿ ಜನರ ಪ್ರೀತಿ ಕಳೆದುಕೊಳ್ಳುತ್ತಿದೆ. ಹೀಗಾಗಿ, ಬ್ಯಾನರ್‌ ವಿಚಾರ ಇಟ್ಟುಕೊಂಡು ಇಷ್ಟು ದೊಡ್ಡಮಟ್ಟದ ಗಲಾಟೆ ನಡೆಸಿದ್ದಾರೆ’ ಎಂದು ಏಕವಚನದಲ್ಲಿ ಹರಿಹಾಯ್ದರು.

ADVERTISEMENT

‘ಜೀವ ರಕ್ಷಣೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಪೊಲೀಸರಿಗೆ ದೂರು ದಾಖಲಿಸಲು ನಿರ್ಧರಿಸಲಾಗಿದೆ’ ಎಂದು ಅವರು ತಿಳಿಸಿದರು.  

ವೇಗ ಹೆಚ್ಚಿದರೆ ಅಪಘಾತ –ಶ್ರೀರಾಮುಲು

ಬಳ್ಳಾರಿ: ‘ಶಾಸಕ ಭರತ್‌ ರೆಡ್ಡಿ ಭಾರೀ ವೇಗದಲ್ಲಿದ್ದಾರೆ. ವೇಗ ಹೆಚ್ಚಾದರೆ ಅಪಘಾತವಾಗುವ ಸಾಧ್ಯತೆ ಹೆಚ್ಚು’ ಎಂದು ಮಾಜಿ ಸಚಿವ ಶ್ರೀರಾಮುಲು ಇಲ್ಲಿ ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಶಾಸಕರಿಗೆ ರಾಜಕೀಯವಾಗಿ ಉಜ್ವಲ ಭವಿಷ್ಯವಿದೆ. ವೇಗ ತಗ್ಗಿಸಬೇಕು. ಗೂಂಡಾಗಿರಿಗೆ ನಾವು ಹೆದರುವವರಲ್ಲ’ ಎಂದರು.

‘ಶಾಸಕ ಜನಾರ್ದನ ರೆಡ್ಡಿ ಸೇರಿ ಪಕ್ಷದ ಯಾವುದೇ ಮುಖಂಡ ಅಥವಾ ಕಾರ್ಯಕರ್ತನಿಗೆ ತೊಂದರೆಯಾದರೂ ನಾನಿರುತ್ತೇನೆ. ಘಟನೆ ಬಗ್ಗೆ ಹೈಕೋರ್ಟ್‌ ನ್ಯಾಯಾಮೂರ್ತಿಗಳಿಂದ ಅಥವಾ ಸಿಬಿಐನಿಂದ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಜನಾರ್ದನ ರೆಡ್ಡಿ ಅವರ ಮನೆ ಸುಟ್ಟು ಹಾಕುತ್ತೇನೆ ಎಂದು ಶಾಸಕ ಭರತ್‌ ರೆಡ್ಡಿ ಹೇಳುತ್ತಿರುವುದು ಮಾಧ್ಯಮಗಳಲ್ಲಿ ನೋಡಿದೆ. ಇದರಿಂದ ಮುಂಚಿತವಾಗಿ ಯೋಜನೆ ರೂಪಿಸಿದ್ದಾರೆ ಎಂಬುದು ಗೊತ್ತಾಗುತ್ತದೆ’ ಎಂದು ಆರೋಪಿಸಿದರು. ‘ಗಲಭೆಗೆ ಕಾರಣನಾದ ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್‌ ರೆಡ್ಡಿಗೆ ಏನೂ ಆಗಿಲ್ಲ. ಅದು ಬೋಗಸ್‌ ಬ್ಯಾಂಡೇಜ್‌’ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.