ADVERTISEMENT

ವಲಸೆ ಹೋದವರ ಮತಗಟ್ಟೆಗೆ ಕರೆತನ್ನಿ: ಸಿಇಒ

ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 15:39 IST
Last Updated 30 ಮಾರ್ಚ್ 2024, 15:39 IST
ಸಂಡೂರು ಪಟ್ಟಣದ ಎಪಿಎಂಸಿ ಪ್ರೌಢ ಶಾಲೆ ಸಭಾಂಗಣದಲ್ಲಿ ನಡೆದ ಬೂತ್ ಮಟ್ಟದ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ್ ಶರಣಪ್ಪ ಸಂಕನೂರು ಮಾತನಾಡಿದರು
ಸಂಡೂರು ಪಟ್ಟಣದ ಎಪಿಎಂಸಿ ಪ್ರೌಢ ಶಾಲೆ ಸಭಾಂಗಣದಲ್ಲಿ ನಡೆದ ಬೂತ್ ಮಟ್ಟದ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ್ ಶರಣಪ್ಪ ಸಂಕನೂರು ಮಾತನಾಡಿದರು    

ಸಂಡೂರು: ಉದ್ಯೋಗ, ವಿದ್ಯಾಭ್ಯಾಸ ಹಾಗೂ ಇತರೆ ಕಾರಣಗಳಿಂದ ಬೇರೆ ಬೇರೆ ಊರುಗಳಿಗೆ ವಲಸೆ‌ ಹೋದ ಮತದಾರರನ್ನು ಮತಕೇಂದ್ರಕ್ಕೆ ಕರೆತರುವ ಕೆಲಸವನ್ನು ಬೂತ್ ಮಟ್ಟದ ಅಧಿಕಾರಿಗಳು ಮಾಡಬೇಕಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ್ ಶರಣಪ್ಪ ಸಂಕನೂರು ಹೇಳಿದರು.

ಸಂಡೂರಿನ ಎಪಿಎಂಸಿ ಪ್ರೌಢಶಾಲೆ ಸಭಾಂಗಣದಲ್ಲಿ ನಡೆದ ಬೂತ್ ಮಟ್ಟದ ಅಧಿಕಾರಿಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಉದ್ಯೋಗ ಖಾತ್ರಿಯಲ್ಲಿ ಕೂಲಿ ಹೆಚ್ಚಳವಾಗಿದ್ದು₹349 ಸಿಗಲಿದೆ ಎಂದು ಮನವರಿಕೆ ಮಾಡಿ ಮತದಾನಕ್ಕೆ ಕರೆತರುವ ಜೊತೆಗೆ ಬರಗಾಲದಲ್ಲಿ ಗ್ರಾಮಗಳಲ್ಲೇ ಉಳಿಯುವಂತೆ ತಿಳಿಸಿ. ಕಳೆದ ಬಾರಿ ಶೇ 71.16ರಷ್ಟು ಮತದಾನವಾಗಿದ್ದು ಕಡಿಮೆ ಮತದಾನ ಆಗಿರುವ ದೋಣಿಮಲೈ ಮತ್ತು ತೋರಣಗಲ್ಲು‌ ಭಾಗದ ಬೂತ್ ಗಳಲ್ಲಿ ಹೆಚ್ಚು ಮತದಾನಕ್ಕೆ ಪ್ರೇರೇಪಿಸಿ. ಮತದಾನ ಜಾಗೃತಿಗೆ ಮನೆಮನೆಗೂ ಭೇಟಿ ನೀಡಿ. ಎಲ್ಲರಿಗೂ ಮತಚೀಟಿ ದೊರಕಿಸಿ ಕೊಡಿ’ ಎಂದು ಸೂಚಿಸಿದರು.

ADVERTISEMENT

ತಹಶೀಲ್ದಾರ್ ಅನಿಲ್ ಕುಮಾರ್ ಮಾತನಾಡಿ, ‘ಸಂಡೂರು ತಾಲ್ಲೂಕಿನಲ್ಲಿ 253 ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ. ವಲಸೆ ಹೋದವರನ್ನು ಕುಟುಂಬಸ್ಥರ ಸಹಕಾರದೊಂದಿಗೆ ಮತದಾನ ಮಾಡಲು ಆಗಮಿಸುವಂತೆ ಕರೆಮಾಡಿ ವಿನಂತಿಸಿ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯ್ತಿ ಇಒ ಎಚ್.ಷಡಕ್ಷರಯ್ಯ, ಜಿಲ್ಲಾ ಪಂಚಾಯ್ತಿ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್ ಅಕ್ಕಿ, ತಾಲ್ಲೂಕು ದೈಹಿಕ ಪರಿವೀಕ್ಷಣಾಧಿಕಾರಿ ಪ್ರಭುದೇವಯ್ಯ ಹಾಗೂ ಬೂತ್ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.